ADVERTISEMENT

ಕಲಿತ ಶಾಲೆಯನ್ನು ಎಂದಿಗೂ ಮರೆಯದಿರಿ

​ಪ್ರಜಾವಾಣಿ ವಾರ್ತೆ
Published 22 ಮೇ 2012, 9:45 IST
Last Updated 22 ಮೇ 2012, 9:45 IST

ಭಾರತೀನಗರ: ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ವಿದ್ಯೆ ಕಲಿಸಿದ ಗುರುಗಳು, ಹಾಗೂ ಜನ್ಮ ನೀಡಿದ ಪೋಷಕರನ್ನು ಎಂದಿಗೂ ಮರೆಯಬಾರದು ಎಂದು ಭಾರತೀ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಮಾದೇಗೌಡ ತಿಳಿಸಿದರು.

ನಗರದ ಭಾರತೀ ಕಾಲೇಜಿನ ಬಯಲು ರಂಗಮಂದಿರದಲ್ಲಿ ಭಾನು ವಾರ ಆಯೋಜಿಸಿದ್ದ ಭಾರತೀ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಮಾಜಿಕ ಕಳಕಳಿಯಿಂದ ಕಳೆದ 50 ವರ್ಷಗಳ ಹಿಂದೆ ಕೆ.ಎಂ.ದೊಡ್ಡಿ ಎಂಬ ಕುಗ್ರಾಮದಲ್ಲಿ ಪ್ರಾರಂಭವಾದ ಭಾರತೀ ಶಿಕ್ಷಣ ಸಂಸ್ಥೆ, ಈ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಪೂರಕವಾಗಿದ್ದು, ಈ ಸಂಸ್ಥೆ ಸುವರ್ಣ ಮಹೋತ್ಸವ ಹಬ್ಬ ಆಚರಿಸಿಕೊಳ್ಳುತ್ತಿದೆ.
 
ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಸಾವಿರಾರು ವಿದ್ಯಾರ್ಥಿಗಳು ಇಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಇದೊಂದು ಅದ್ಭುತ ಸಾಧನೆ ಎಂದು ಬಣ್ಣಿಸಿದರು.

ಮುಂದಿನ ತಿಂಗಳು ಸುವರ್ಣ ಹಬ್ಬ ಆಚರಿಸಿಕೊಳ್ಳುತ್ತಿರುವ ಭಾರತೀ ಕಾಲೇಜು ನಮ್ಮದಲ್ಲ, ಅದು ನಿಮ್ಮ ಕಾಲೇಜು ಎಂದು ತಿಳಿದು ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಎಂದು ಮನವಿ ಮಾಡಿದರು.

ಕಾಲೇಜಿನಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇರುವವರು ಆರ್ಥಿಕ ಸಹಾಯ ಮಾಡುವ ಮೂಲಕ ಕಾಲೇಜನ್ನು ಮತ್ತಷ್ಟೂ ಅಭಿವೃದ್ಧಿ ಪಡಿಸಲು ಸಹಕಾರ ನೀಡಬೇಕು ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ನಿಮ್ಮ ಜೊತೆ ಬೆಳೆಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಎಸಿಪಿ ರಾಮಲಿಂಗಯ್ಯ, ದ್ರಾಕ್ಷರಸ ಮಂಡಳಿ ನಿರ್ದೆಶಕ ಡಾ.ಕೃಷ್ಣ, ಎಂ.ಶಿವಲಿಂಗೇ ಗೌಡ, ರವಿಕುಮಾರ್‌ಗೌಡ, ಅಂಬಾನಿ ಗ್ರೂಪ್ಸ್‌ನ ಜಯಶಂಕರಆರಾಧ್ಯ, ಶಿವಲಿಂಗೇಗೌಡ, ಮಾದಯ್ಯ, ಎಂ.ಎಸ್.ಕೃಷ್ಣಪ್ಪ, ಮಾದಯ್ಯ, ಬಸವ ರಾಜೇಗೌಡ, ಎಚ್.ಆರ್.ದಯನಂದಸ್ವಾಮಿ, ಚಂದ್ರ ಶೇಖರ್, ಪ್ರೊ.ಟಿ.ವಿ.ಹನುಮಪ್ಪ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕರಾದ ಪ್ರೊ.ಕೆಂಪೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.