ಕೆ.ಆರ್.ಪೇಟೆ: ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮಗೆ ಹೆಚ್ಚು ಮತಗಳು ಬರುವಂತೆ ಶ್ರಮಿಸಿದ್ದು, ಕೊನೆಯ ಉಸಿರಿರುವವರೆಗೂ ಅವರ ಪರವಾಗಿ ಕಾರ್ಯ ನಿರ್ವಹಿಸುವುದಾಗಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನನ್ನ ಸೋಲಿನ ಬಗ್ಗೆ ಯಾರೂ ಧೃತಿಗೆಡು ವುದು ಬೇಡ. ನಾನು ರಾಜಕೀಯ ವಾಗಿ ನಿವೃತ್ತಿಯಾಗುವುದಿಲ್ಲ. ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಲಿದ್ದೇನೆ. ಕಾರ್ಯಕರ್ತರ ಬೆನ್ನೆಲುಬಾಗಿ ಅವರ ಕಷ್ಟ–ಸುಖಗಳಿಗೆ ಸ್ಪಂದಿಸುತ್ತೇನೆ. ಆದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೆದರದೇ ಪಕ್ಷ ಸಂಘಟಿಸುವಲ್ಲಿ ದುಡಿಯಬೇಕು’ ಎಂದರು.
ಕ್ಷೇತ್ರದ ಜನತೆ ಸುಮಾರು 70,897 ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಅದಕ್ಕಾಗಿ ಮತದಾರರಿಗೆ ಆಭಾರಿಯಾಗಿ ದ್ದೇನೆ ಎಂದರು. ತಮ್ಮ ಸೋಲಿನ ಬಗ್ಗೆ ವ್ಯಾಖ್ಯಾನಿಸಿದ ಅವರು ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದ್ದಿತ್ತಾದರೂ ಕುಮಾರಸ್ವಾಮಿಯವರ ಮೇಲಿನ ಪ್ರೀತಿಯಿಂದ ಇಡೀ ಜಿಲ್ಲೆಯ ಜನ ಚುನಾವಣೆಯಲ್ಲಿ ಜೆಡಿಎಸ್ ಹೊರತುಪಡಿಸಿ ಕಣದಲ್ಲಿ ನಿಂತಿದ್ದ ಯಾವೊಬ್ಬ ಅಭ್ಯರ್ಥಿಗಳ ಬಗ್ಗೆ ಕಣ್ಣೆತ್ತಿಯೂ ನೋಡದೆ ಪರಾಜಯ ಗೊಳಿಸಿದ್ದಾರೆ. ಅದಕ್ಕೆ ನಾನೂ ಬಲಿಪಶು ವಾಗಿದ್ದೇನೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಆದಿಹಳ್ಳಿ ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.