ADVERTISEMENT

ಕಾವೇರಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ

ಕರ್ನಾಟಕ ಜಲವೇದಿಕೆ ಸದಸ್ಯ ಪ್ರಸನ್ನಕುಮಾರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:13 IST
Last Updated 27 ಮಾರ್ಚ್ 2018, 10:13 IST

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಅಥವಾ ಪುನರ್‌ವಿಮರ್ಶೆ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಜಲವೇದಿಕೆ ಸದಸ್ಯ ಪ್ರಸನ್ನಕುಮಾರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕಾವೇರಿ ವಿಚಾರವಾಗಿ ನಿರಂತರ ಅನ್ಯಾಯವಾಗುತ್ತಿದೆ. ಕಾವೇರಿ ನ್ಯಾಯಮಂಡಳಿಯ ರಾಜ್ಯ ಪರ ವಕೀಲ ನಾರಿಮನ್ ಮೇಲ್ಮನವಿ ಸಲ್ಲಿಸಲು ಯಾವುದೇ ಅಂಶಗಳು ಇಲ್ಲ ಎಂದು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಹಲವು ಅಂಶಗಳು ಇವೆ. 1924ರಲ್ಲಿ ಜಾರಿ ಮಾಡಿದ್ದ 40 ಸಾವಿರ ಎಕರೆಯಲ್ಲಿ ಮಾತ್ರ ಕಬ್ಬು ಬೆಳೆಯಬೇಕು, ಕೇವಲ 125 ದಿನಕ್ಕೆ ಕಟಾವಿಗೆ ಬರುವ ಭತ್ತ ಬೆಳೆಯಬೇಕು ಹಾಗೂ ಎರಡನೇ ಬೆಳೆಯಾಗಿ ಭತ್ತವನ್ನು ಬೆಳೆಯಬಾರದು ಎಂಬ ಮಿತಿಯನ್ನು ತೆಗೆದು ಹಾಕಬೇಕು. ತಮಿಳುನಾಡು ಸರ್ಕಾರ ಹೆಚ್ಚುವರಿಯಾಗಿ ಕಾವೇರಿ ವಿವಾದ ಜಲ ಪಂಚಾಯಿತಿ ಅಡಿಯಲ್ಲಿ ಸೇರ್ಪಡೆ ಮಾಡಿದ 3.24 ಲಕ್ಷ ಎಕರೆ ನೀರಾವರಿಗೆ ನೀರು ಬಿಡುವುದನ್ನು ತಡೆಯಲು ಮೇಲ್ಮನವಿ ಸಲ್ಲಿಸಬೇಕು’ ಎಂದರು.

ADVERTISEMENT

‘ಸಂಕಷ್ಟ ಸೂತ್ರವನ್ನು ವರ್ಷದ ಕೊನೆಯಲ್ಲಿ ನಿರ್ಧರಿಸುವ ಬದಲು, ಮಳೆ ಬೀಳುವ ತಿಂಗಳಿನ ನಂತರ ಮಳೆ ಬಿದ್ದ ಪ್ರಮಾಣಕ್ಕೆ ಅನುಗುಣವಾಗಿ ಸಂಕಷ್ಟ ಸೂತ್ರ ನಿಗದಿ ಮಾಡಬೇಕು. ಪರಸರ, ನೀರಿನ ಆವಿ ಹಾಗೂ ನೀರು ಪೋಲಾಗುವಿಕೆ,  ನೀರನ್ನು ಕೇವಲ ತಮಿಳುನಾಡಿಗೆ ಬಿಡದೆ ನಮ್ಮ ರಾಜ್ಯಕ್ಕೂ ಸಮಪಾಲು ಕೇಳಬೇಕು. ರಾಜ್ಯಕ್ಕೆ ನ್ಯಾಯಯುತವಾಗಿ ಸಿಕ್ಕ ನೀರಿನಲ್ಲಿ ರೈತರು ಯಾವ ಬೆಳೆ ಬೆಳೆಯಬೇಕು ಎಂಬ ವಿಷಯದಲ್ಲಿ ಕೇಂದ್ರ ಹಾಗೂ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದರು.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮುಂದಿನ ಕೂಡಲೇ ರಾಜ್ಯ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಬೇಕು. ಮೇಲ್ಮನವಿ ಸಲ್ಲಿಸದೆ ಇದ್ದರೆ ರೈತರು, ವಿದ್ಯಾರ್ಥಿಗಳು, ಯುವ ಸಂಘಟನೆಗಳು, ಕಾವೇರಿ ಹಿತ ರಕ್ಷಣೆ ಸಂಘಟನೆಗಳು ಹಾಗೂ ಕಾವೇರಿ ಕಣಿವೆಯ ಜನರನ್ನು ಸಂಘಟನೆ ಮಾಡಿ ಉಗ್ರ ಹೋರಾಟ ಮಾಡುವುದಾಗಿ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.