ADVERTISEMENT

ಕೆಆರ್‌ಎಸ್: 33 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 8:46 IST
Last Updated 25 ಜುಲೈ 2013, 8:46 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ 106 ಅಡಿ ಮಟ್ಟದ ನಾಲ್ಕು ಗೇಟ್‌ಗಳ  ಮೂಲಕ ಬುಧವಾರ ಸಂಜೆ ನೀರು ಹೊರಬಿಡಲಾಯಿತು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ 106 ಅಡಿ ಮಟ್ಟದ ನಾಲ್ಕು ಗೇಟ್‌ಗಳ ಮೂಲಕ ಬುಧವಾರ ಸಂಜೆ ನೀರು ಹೊರಬಿಡಲಾಯಿತು.   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಜಲಾಶಯದಿಂದ ಬುಧವಾರ ಸಂಜೆ 33 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ.

ಜಲಾಶಯದ 106 ಅಡಿ ಮಟ್ಟದ 4 ಹಾಗೂ 103 ಅಡಿ ಮಟ್ಟದ 11 ಸೇರಿ ಒಟ್ಟು 15 ಗೇಟ್‌ಗಳ ಮೂಲಕ ಒಟ್ಟು 33 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಜಲಾಶಯದಲ್ಲಿ 124.44 ಅಡಿ ನೀರು (ಗರಿಷ್ಠ 124.80 ಅಡಿ) ಸಂಗ್ರಹವಾಗಿ ರುವುದರಿಂದ ನದಿಗೆ ನೀರು ಹರಿಸಲಾಗುತ್ತಿದೆ.

ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಕೆಆರ್‌ಎಸ್‌ನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ಮೈಸೂರು ಎಸ್ಪಿ ಅಭಿನವ್ ಖರೆ, ಮಂಡ್ಯ ಎಸ್ಪಿ ಭೂಷಣ ಜಿ. ಬೊರಸೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಪಿ.ಸಿ.ಜಯಣ್ಣ, ಉಪ ವಿಭಾಗಾಧಿಕಾರಿ ಎಂ. ದಾಸೇಗೌಡ, ತಹಶೀಲ್ದಾರ್‌ಗಳಾದ ಸುರೇಶ್, ಶಿವಕುಮಾರ್, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಂಕರೇಗೌಡ, ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಇತರರನ್ನು ಒಳಗೊಂಡ ಸಭೆ ನಡೆಯಿತು.

ನದಿಗೆ ನೀರು ಹರಿಸುವುದರಿಂದ ತಗ್ಗು ಪ್ರದೇಶದ ಜನರ ರಕ್ಷಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚೆ ನಡೆಯಿತು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಜಲಾಶಯದ ತಗ್ಗಿನಲ್ಲಿರುವ ಪಶ್ಚಿಮ ವಾಹಿನಿ, ಕಾವೇರಿಪುರ, ಮಹದೇವಪುರ, ಮೇಳಾಪುರ ಇತರೆಡೆ ನೀರು ನುಗ್ಗುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕು.

ಜನ, ಜಾನುವಾರುಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಬೇಕು. ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳು 24 ಗಂಟೆಯೂ ಜಾಗ್ರತೆ ವಹಿಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.