ADVERTISEMENT

ಕೆ.ಆರ್. ಪೇಟೆ: ಐಟಿ ಯುವತಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 6:41 IST
Last Updated 18 ಏಪ್ರಿಲ್ 2013, 6:41 IST

ಮಂಡ್ಯ: ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಅರ್ಧ ಲಕ್ಷದಷ್ಟು ಸಂಬಳ ತೆಗೆದುಕೊಳ್ಳುವ ಹುದ್ದೆ ಬಿಟ್ಟು ತಾಲ್ಲೂಕಿನ ಜನರ ಸಮಸ್ಯೆ ಸ್ಪಂದಿಸುವ ಉತ್ಸಾಹದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ  ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಯುವತಿ ಯೊಬ್ಬಳು ಕೆ.ಆರ್. ಪೇಟೆ ವಿಧಾನಸಭೆಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾಳೆ.

ಬೆಂಗಳೂರಿನ ಹ್ಯಾಲೆಟ್ ಪ್ಯಾಕ್ (ಎಚ್‌ಪಿ) ಮತ್ತು ಐಬಿಎಮ್‌ಎಲ್ ಕಂಪೆನಿಯಲ್ಲಿದ್ದಾಗ ತಿಂಗಳಿಗೆ 52 ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದರು. ಮುಂದೆ ತುಮಕೂರಿನಲ್ಲಿ ಸ್ನೇಹಿತಯೊಂದಿಗೆ ಸಂಯುಕ್ತಿ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯನ್ನೂ ಆರಂಭಿಸಿದ್ದರು. ಅದನ್ನು ಸ್ನೇಹಿತೆಗೆ ಮಾರಾಟ ಮಾಡಿ ಬಂದು ಚುನಾವಣೆಗೆ ಇಳಿದಿದ್ದಾರೆ 27 ವರ್ಷದ ಯುವತಿ ಜಿ.ಸಿ. ಆಶಾ.

ಎಸ್ಸೆಸ್ಸೆಲ್ಸಿಯವರೆಗೆ ಗ್ರಾಮ ದಲ್ಲಿಯೇ ಇದ್ದ ಇವರು, ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಪಿಯುಸಿಯನ್ನು ಹಾಗೂ ಎಂಜಿನಿ ಯರಿಂಗ್ ಅನ್ನು ಅಲ್ಲಿಯ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಯಲ್ಲಿ 2008ರಲ್ಲಿ ಪೂರ್ಣ ಗೊಳಿ ಸಿದರು. ಆ ನಂತರ ನೌಕರಿಗಾಗಿ ಬೆಂಗಳೂರು ಹಾಗೂ ತುಮಕೂರಿನಲ್ಲಿಯೇ ಇದ್ದರು.

ಇವರ ತಂದೆ ಚಂದ್ರಶೇಖರ್ ಹಾಗೂ ತಾಯಿ ಗೌರಮಣಿ ಅವರು ಒಕ್ಕಲುತನ ಮಾಡಿಕೊಂಡಿರುವ, ಹುಟ್ಟೂರಾದ ಗುಬ್ಬಳ್ಳಿಗೆ ವರ್ಷದ ಹಿಂದೆ ಬಂದಿದ್ದರು.

ಗುಬ್ಬಹಳ್ಳಿಗೆ ಇಂದಿಗೂ ಬಸ್ ಸೌಲಭ್ಯವಿಲ್ಲ. ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಮೂಲ ಸೌಕರ್ಯವನ್ನೂ ಪಡೆಯಲು ಸಾಧ್ಯವಾಗದಿರುವುದು ನೋಡಿ ಬೇಜಾರಾಯಿತು. ಆರು ತಿಂಗಳಿನಿಂದ ಗ್ರಾಮದಲ್ಲಿಯೇ ಇದ್ದು, ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಅವರು.

ತಾಲ್ಲೂಕಿನ ಬಹಳಷ್ಟು ಹಳ್ಳಿಗಳಲ್ಲಿಯೂ ಸುತ್ತಿ ಸಮಸ್ಯೆಗಳ ಅಧ್ಯಯನ ಮಾಡಿದ್ದೇನೆ. ಪಕ್ಷ ನೋಡಿ ಮತ ಚಲಾಯಿಸುವುದಕ್ಕಿಂತ ವ್ಯಕ್ತಿ ನೋಡಿ ಮತ ಚಲಾಯಿಸಿ. ಬದಲಾವಣೆಗೆ ಸ್ಪಂದಿಸಿ, ಎಂಜಿನಿ ಯ ರಿಂಗ್ ಪೂರ್ಣಗೊಳಿಸಿದ್ದೇನೆ ಎಂದು ತಿಳಿಸು ತ್ತಿದ್ದೇನೆ. ನನಗೇ ಮತ ಚಲಾಯಿಸಿ ಎಂದು ಕೇಳುವುದಿಲ್ಲ.

ಮತದಾನದಲ್ಲಿ ಪಾಲ್ಗೊಳ್ಳಬೇಕು. ಉತ್ತಮರಿಗೆ ಮತ ಹಾಕಬೇಕು ಎಂಬುದೇ ನನ್ನ ಆಶಯ ಎಂದು `ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾವಣೆ ಬಗೆಗೆ ಮಾತನಾಡುತ್ತೇವೆ. ಅದರೆ ಅದರ ಭಾಗವಾಗಿ ಬದಲಾಯಿಸಲು ಮುಂದಾಗುವುದಿಲ್ಲ. ಆ ಪ್ರಯತ್ನಕ್ಕೆ ನಾನು ಕೈಹಾಕಿದ್ದೇನೆ. ಹಾಗಂತ ಸಂಪೂರ್ಣ ಬದಲಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ಆದರೂ ಪ್ರಯತ್ನ ಕೈಬಿಡಬಾರದು ಎನ್ನುವ ಆಶಾಭಾವನೆ ನನ್ನದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.