ಶ್ರೀರಂಗಪಟ್ಟಣ: ಪಟ್ಟಣದ ಪೂರ್ವ ಕೋಟೆಯ ಮೇಲೆ ಫ್ಲೆಕ್ಸ್, ಪೋಸ್ಟರ್, ಬ್ಯಾನರ್ಗಳನ್ನು ಹಾಕಿದ್ದು ಮಹತ್ವದ ಸ್ಮಾರಕ ವಿರೂಪಗೊಂಡಿದೆ.
ಪಟ್ಟಣದ ಒಳಗೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ಮಾರ್ಗದಲ್ಲಿ, ಕೋಟೆ ದ್ವಾರದ ಇಕ್ಕೆಲಗಳಲ್ಲಿ ಫ್ಲೆಕ್ಸ್, ಪೋಸ್ಟರ್ಗಳನ್ನು ಮನಸೋ ಇಚ್ಛೆ ಹಾಕಲಾಗಿದೆ. ಕೋಟೆಯ ಪ್ರತಿ ಅಡಿಗೂ ಸಿನಿಮಾ, ಜಾಹಿರಾತು, ಹುಟ್ಟುಹಬ್ಬ, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಅಂಟಿಸಲಾಗಿದೆ. ಮಧ್ಯ ಕೋಟೆಗೂ ಪ್ರಚಾರದ ವಿವಿಧ ಫ್ಲೆಕ್ಸ್ಗಳನ್ನು ಹಾಕಿದ್ದು ಅಪರೂಪದ ಸ್ಮಾರಕವನ್ನು ಅಂದಗೆಡಿಸಲಾಗಿದೆ. ಕಮಾನು ಮಾದರಿಯ ಕೋಟೆಯೊಳಗೆ ಸಾಗುವ ಮಾರ್ಗದಲ್ಲಿ ಈ ಜಾಹಿರಾತು ಫಲಕ, ಫ್ಲೆಕ್ಸ್ಗಳು ಕಣ್ಣಿಗೆ ರಾಚುತ್ತವೆ. ಟಿಪ್ಪು ಕೋಟೆ `ಜೋಗಯ್ಯ~ನ ಕೋಟೆಯಾಗಿದೆ.
`ಸ್ಮಾರಕ ಸಂರಕ್ಷಣೆ ಹಾಗೂ ಅತಿಕ್ರಮಿಸಿದರೆ ಕ್ರಮ ಜರುಗಿಸಲಾಗುವುದು~ ಎಂಬ ಪ್ರಾಚ್ಯವಸ್ತು ಇಲಾಖೆಯ ಎಚ್ಚರಿಕೆಯ ಫಲಕದ ಗೇಣು ದೂರದಲ್ಲಿ ಇಂತಹ `ಹಾಳುಗೆಲಸ~ ನಡೆಯುತ್ತಿದೆ. ಪಾಳು ಗೋಡೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳುವಂತೆ ಕೋಟೆಯನ್ನು ಬಳಸಿಕೊಳ್ಳಲಾಗುತ್ತಿದೆ. ಪುರಸಭೆ ಕಚೇರಿಗೆ ಹಾಗೂ ಟಿಪ್ಪು ಸುಲ್ತಾನ್ ಮಸೀದಿಗೆ ಕೂಗಳತೆ ದೂರದಲ್ಲಿ ಈ ಕೃತ್ಯ ನಡೆಯುತ್ತಿದೆ. ಪೂರ್ವ ಕೋಟೆ ದ್ವಾರದ ಬಲ ಬದಿಯಲ್ಲಿ ಮೀನು ಮಾರಾಟ ಅಡೆ ತಡೆಯಿಲ್ಲದೆ ನಡೆಯುತ್ತಿದ್ದು, ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ನಾಡ ಹಬ್ಬ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ದೇಶ, ವಿದೇಶಗಳ ಪ್ರವಾಸಿಗರು ಇತ್ತ ಮುಖ ಮಾಡುವ ಸಂದರ್ಭದಲ್ಲಿ ಇಂತಹ ಅವ್ಯವಸ್ಥೆ ಸೃಷ್ಟಿಯಾಗಿದೆ.
`ಶ್ರೀರಂಗಪಟ್ಟಣವನ್ನು ಪಾರಂಪರಿಕ ಪಟ್ಟಣ ಎಂದು ಘೋಷಿಸಲಾಗಿದ್ದು, ಸ್ಮಾರಕ ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ. ಪ್ರಾಚ್ಯವಸ್ತು ಇಲಾಖೆ ಸ್ಮಾರಕ ವಿರೂಪಗೊಳಿಸುವ ಹಾಗೂ ಅತಿಕ್ರಮಿಸುವವರ ವಿರುದ್ಧ ಕ್ರಮ ಜರುಗಿಸಲಿದೆ. ಈ ಕುರಿತು ಪರಂಪರೆ ಇಲಾಖೆ ಆಯಕ್ತರ ಗಮನ ಸೆಳೆಯುತ್ತೇನೆ. ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಫ್ಲೆಕ್ಸ್, ಪೋಸ್ಟರ್ ತೆರವುಗೊಳಿಸುವ ಹಾಗೂ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವ ಕುರಿತು ನಿರ್ಧರಿಸಲಾ ಗುವುದು~ ಎಂದು ವಸ್ತು ಸಂಗ್ರಹಾಲ ಯಗಳು ಮತ್ತು ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಸಿದ್ದನಗೌಡರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.