ಶ್ರೀರಂಗಪಟ್ಟಣ: ಇಲ್ಲಿನ ಕಾವೇರಿ ನದಿತೀರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಲಾ ಶಿಬಿರದಲ್ಲಿ ಪ್ರಸಿದ್ಧ ಕಲಾವಿದರು ಪಾಲ್ಗೊಂಡು ಗಮನಸೆಳೆದರು.
ಬೆಂಗಳೂರಿನ ಚಿತ್ರಕಲಾ ಪರಿಷತ್ ಆಯೋಜಿಸಿರುವ ಮೂರು ದಿನಗಳಿಂದ ನಡೆಯುತ್ತಿರುವ ಈ ಶಿಬಿರವು ಕಲಾ ಇತಿಹಾಸಕಾರರು ಹಾಗೂ ಕಲಾವಿದರ ಸಂಗಮವಾಗಿದೆ.
ಕಲಾ ಇತಿಹಾಸಕಾರರಾದ ಬೆಂಗಳೂರಿನ ಸುರೇಶ್ ಜಯರಾಂ, ಎಚ್.ಎ. ಅನಿಲ್ಕುಮಾರ್, ಆಂಧ್ರ ಪ್ರದೇಶದ ಶ್ರೀನಿವಾಸ ಸಿಸ್ತಲ, ಕೇರಳದ ಟಿ.ವಿ.ಚಂದ್ರನ್, ತಮಿಳುನಾಡಿನ ವೈಷ್ಣವಿ ರಾಮನಾಥನ್, ಮುಂಬೈಯ ಶ್ರುತಿ ರಾಮಲಿಂಗಯ್ಯ ಅಂಥ ಪ್ರಖ್ಯಾತರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ನೇಪಾಳದ ಎನ್.ಬಿ. ಗುರುಂಗ್, ಮುಂಬೈನ ಸಿ.ಎನ್. ಸನಂ, ಜಾನ್ ಡಗ್ಲಾಸ್ ಇತರರು ಈ ಶಿಬಿರದಲ್ಲಿ ಭಾಗಿಯಾಗಿರುವುದು ವಿಶೇಷ.
‘ಬೆಂಗಳೂರಿನ ಚಿತ್ರಕಲಾ ಪರಿಷತ್ ಇದೇ ಮೊದಲಿಗೆ ಬಾರಿಗೆ ಪ್ರಕೃತಿಯ ನಡುವೆ ಚಿತ್ರಕಲಾ ಶಿಬಿರ ಏರ್ಪಡಿಸಿದೆ. ಜಲವರ್ಣ ಕಲಾ ತಜ್ಞರು ಇಲ್ಲಿ ಸೇರಿದ್ದಾರೆ’ ಎಂದು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ಪ್ರೊ. ಕೆ.ಎಸ್.ಅಪ್ಪಾಜಯ್ಯ ಅವರು ಹೇಳಿದರು.‘ಕಲಾವಿದರು ಮತ್ತು ಕಲಾ ಇತಿಹಾಸಕಾರರು ತಲಾ ಎರಡು, ಮೂರು ಚಿತ್ರಗಳನ್ನು ರಚಿಸಿ ಪರಿಷತ್ಗೆ ನೀಡಲಿದ್ದಾರೆ.
ಚಿತ್ರಕಲಾ ಪರಿಷತ್ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡರಾವ್ ಅವರ ಜನ್ಮದಿನವಾದ ಜುಲೈ 5ರಂದು ಬೆಂಗಳೂರಿನಲ್ಲಿ ಇವುಗಳ ಪ್ರದರ್ಶನ ನಡೆಯಲಿದೆ’ ಎಂದು ವಿವರಿಸಿದರು.
‘ಚಿತ್ರಕಲಾ ಪರಿಷತ್ನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಮವಾರ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಏ.10ರಂದು ಬೆಳಿಗ್ಗೆ 11.30ಕ್ಕೆ ಶಿಬಿರದ ಸಮಾರೋಪ ನಡೆಯಲಿದೆ’ ಎಂದು ಇದೇ ಸಂದರ್ಭದಲ್ಲಿ ಚಿತ್ರಕಲಾ ವಿಮರ್ಶಕ ಎಚ್.ಎ. ಅನಿಲ್ಕುಮಾರ್ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.