ADVERTISEMENT

ಜನರ ಸಂಕಷ್ಟಗಳಿಗೆ ಸ್ಪಂದಿಸಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 9:30 IST
Last Updated 2 ಜೂನ್ 2011, 9:30 IST

ಕೃಷ್ಣರಾಜಪೇಟೆ: ಸಾರ್ವಜನಿಕರ ಕಷ್ಟ, ಕಾರ್ಪಣ್ಯಗಳಿಗೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಇಲಾಖೆಯ ಬಗ್ಗೆ ಅವರಿಗೆ ಗೌರವ ಬರುವಂತೆ ಪೋಲಿಸರು ನಡೆದು ಕೊಳ್ಳಬೇಕು ಎಂದು ಶ್ರೀರಂಗಪಟ್ಟಣ ಡಿವೈಎಸ್‌ಪಿ ಲಾರೆನ್ಸ್ ಸಲಹೆ ನೀಡಿದರು.

ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮಂಗಳವಾರ ನಡೆದ ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಸಾರ್ವಜನಿಕರು ಕಾನೂನಿಗೆ ಗೌರವ ಕೊಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಿರ್ಭಯವಾಗಿ ಗೌರವ ದಿಂದ ಬದುಕುವಂತೆ ಮಾಡುವುದಕ್ಕೆ ಇಲಾಖೆ ಬದ್ಧವಾಗಿದೆ.ಜನರು ಪೋಲಿಸ್ ವ್ಯವಸ್ಥೆ ಬಗ್ಗೆ ನಂಬಿಕೆ ಇಟ್ಟುಕೊಂಡು ವ್ಯವಹರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿದ್ದ ಜಿ.ಪಂ ಸದಸ್ಯ ಆರ್.ಕೆ.ಕುಮಾರ್, ಮುಖಂಡರಾದ ಬಸ್ತಿರಂಗಪ್ಪ, ಸುರೇಶ್ ಹರಿಜನ, ಶಿವನಂಜಯ್ಯ ಮತ್ತಿತರರು ತಾಲ್ಲೂಕಿನಲ್ಲಿ ಆಪೇ ಆಟೋರಿಕ್ಷಾಗಳ ಹಾವಳಿ ನಿಯಂತ್ರಿಸಬೇಕು. ದಲಿತ ಕೇರಿಗಳಲ್ಲಿ ಮದ್ಯ ಮಾರಾಟ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಸಭೆಗೆ ಬಹಿಷ್ಕಾರ: ಸಭೆ ಕರೆದಿದ್ದ ಅಧಿಕಾರಿಗಳೇ ನಿಗದಿತ ವೇಳೆಗೆ ಬಾರದೇ ತಮ್ಮನ್ನು ಕಾಯಿಸಿದ್ದನ್ನು ಆಕ್ಷೇಪಿಸಿ ಕೆಲವು ದಲಿತ ಮುಖಂಡರು ಈ ಸಭೆಯಿಂದ ಹೊರನಡೆದ ಘಟನೆಯೂ ಸಹ ನಡೆಯಿತು.

ವಿವಿಧ ಪ್ರಕರಣಗಳಲ್ಲಿ ತಾಲ್ಲೂಕಿನ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದೀರಿ. ಸಭೆಗೆ ಬರುವಂತೆ ಆಹ್ವಾನಿಸಿ ಪೋಲಿಸ್ ಠಾಣೆಯ ಬಾಗಿಲು ಕಾಯುವಂತೆ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದ ಡಾ.ಕೃಷ್ಣಮೂರ್ತಿ, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಬಂಡಿ ಹೊಳೆ ರಮೇಶ್, ತೆಂಗಿನಘಟ್ಟ ರಾಮ ಕೃಷ್ಣ, ಮಾಕವಳ್ಳಿ ಸಣ್ಣಯ್ಯ ಮತ್ತಿತರರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.