ADVERTISEMENT

ಡೇರಿ ಕಟ್ಟಡ ನಿರ್ಮಾಣಕ್ಕೆ ₹4 ಲಕ್ಷ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 12:55 IST
Last Updated 26 ಮೇ 2018, 12:55 IST

ಪಾಂಡವಪುರ: ಪಟ್ಟಣದ ಮನ್‌ಮುಲ್‌ ಉಪ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಟ್ಟನಹಳ್ಳಿಯ ಡೇರಿ ಕಟ್ಟಡಕ್ಕೆ ₹3 ಲಕ್ಷ ಹಾಗೂ ಜಿ.ಸಿಂಗಾಪುರದ ಡೇರಿ ಕಟ್ಟಡಕ್ಕೆ ₹1 ಲಕ್ಷ ಅನುದಾನದ ಚೆಕ್‌ಗಳನ್ನು ಮನ್‌ಮುಲ್‌ ಉಪಾಧ್ಯಕ್ಷ ಜಿ.ಇ.ರವಿಕುಮಾರ್ ವಿತರಿಸಿದರು.

ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ಮೃತಪಟ್ಟಿರುವ 120 ಹಸುಗಳ ಮಾಲೀಕರಿಗೆ ಒಟ್ಟು ₹42 ಲಕ್ಷ ಪರಿಹಾರ ನೀಡಲಾಗಿದೆ. ಹೊಸ ಡೇರಿ ಕಟ್ಟಡಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದು ರವಿಕುಮಾರ್ ಹೇಳಿದರು.

ಹಸುಗಳ ಸಾವಿನಿಂದ ರೈತರಿಗೆ ನಷ್ಟವಾಗುತ್ತಿರುವುದನ್ನು ಮನಗಂಡು ಮನ್‌ಮುಲ್‌ ಸಹಯೋಗದಲ್ಲಿ ವಿಮೆ ಮಾಡಲಾಗುತ್ತಿದೆ. ಹೈನುಗಾರರು ಶೇ 30ರಷ್ಟು ವಿಮಾ ಹಣವನ್ನು ಭರಿಸಬೇಕು. ಉಳಿದ ಶೇ 70ರಷ್ಟನ್ನು ಮನ್‌ಮುಲ್ ಭರಿಸುತ್ತದೆ. ಈ ಸೌಲಭ್ಯವನ್ನು ಹೈನುಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಡೇರಿ ಕಟ್ಟಡಗಳಿಗೆ ಮಂಡ್ಯ ಹಾಲು ಒಕ್ಕೂಟದಿಂದ ನೀಡುವ ಅನುದಾನ ಸದ್ಬಳಕೆ ಮಾಡಿಕೊಂಡು ಸುಸಜ್ಜಿತವಾದ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕು. ಈ ಮೂಲಕ ಹೈನುಗಾರಿಕೆಯನ್ನು ಲಾಭ ದಾಯಕವಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಹೇಳಿದರು.

ಮನ್‌ಮುಲ್‌ ಉಪ ವ್ಯವಸ್ಥಾಪಕ ಡಾ.ಮೋಹನ್‌ಕುಮಾರ್, ಮಾರ್ಗ ವಿಸ್ತರಣಾಧಿಕಾರಿಗಳಾದ ಬಿ.ಜಿ.ಉಮಾಶಂಕರ್, ಪ್ರತಾಪ್‌, ದಿವ್ಯಶ್ರೀ, ಚಿಟ್ಟನಹಳ್ಳಿಯ ಎಂಪಿಸಿಎಸ್‌ ಅಧ್ಯಕ್ಷೆ ಶೋಭಾ, ಕಾರ್ಯದರ್ಶಿ ಲಿಂಗರಾಜು, ಜಿ.ಸಿಂಗಾಪುರದ ಎಂಪಿಸಿಎಸ್‌ ಅಧ್ಯಕ್ಷೆ ರಾಧಾ, ಕಾರ್ಯದರ್ಶಿ ಪವಿತ್ರಾ, ಕಾಂಗ್ರೆಸ್ ಕಿಸಾನ್ ಘಟಕದ ತಾ‌ಲ್ಲೂಕು ಅಧ್ಯಕ್ಷ ಸಿ.ಆರ್.ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.