ADVERTISEMENT

ದಸರಾ ಮಂಟಪದಿಂದಲೇ ಅಂಬಾರಿ ಉತ್ಸವ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 9:25 IST
Last Updated 24 ಸೆಪ್ಟೆಂಬರ್ 2011, 9:25 IST

ಶ್ರೀರಂಗಪಟ್ಟಣ: ಸೆ.30ರಿಂದ ಅ.4ರ ವರೆಗೆ 5 ದಿನಗಳ ಕಾಲ ಪಟ್ಟಣದಲ್ಲಿ ದಸರಾ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸೆ.30ರಂದು ಕಿರಂಗೂರು ಬಳಿಯ ಐತಿಹಾಸಿಕ ದಸರಾ ಬನ್ನಿ ಮಂಟಪದಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ ಆನೆ ಅಂಬಾರಿ ಉತ್ಸವ ನಡೆಯಲಿದೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ತಿಳಿಸಿದರು.

  ಶುಕ್ರವಾರ ದಸರಾ ಬನ್ನಿಮಂಟಪ ಸ್ಥಳಕ್ಕೆ ಶಾಸಕರ ಜತೆ ಭೇಟಿ ನೀಡಿ ಪರಿಶೀಲನೆ ನಡಸಿದ ಬಳಿಕ ಅವರು ಮಾತನಾಡಿದರು. ಬನ್ನಿ ಮಂಟಪ ಜಮೀನು ವಿವಾದ ಬಗೆ ಹರಿದಿದೆ. ಮಂಟಪದ ಸುತ್ತ ಇದ್ದ 12 ಗುಂಟೆ ಜಮೀನಿಗೆ ತಕರಾರು ಸಲ್ಲಿಸಿದ್ದ ನಾಗರಾಜು ಎಂಬವರು ಸ್ವಪ್ರೇರಣೆಯಿಂದ ತಕರಾರು ವಾಪಸ್ ಪಡೆದಿದ್ದಾರೆ.
ಒಟ್ಟು 14 ಗುಂಟೆ ಜಾಗ ಬನ್ನಿ ಮಂಟಪಕ್ಕೆ ಸೇರಿದ್ದು ಅದನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ. ಮಂಟಕ್ಕೆ ಹೊಂದಿಕೊಂಡಿರುವ ಕೊಳವನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.

  ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಈ ಬಾರಿ ದಸರಾ ಉತ್ಸವ ಕಳೆದ ವರ್ಷಕ್ಕಿಂತ ಸಂಭ್ರಮದಿಂದ ನಡೆಯಲಿದೆ. ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಉಪ ಸಮಿತಿಗಳನ್ನು ನೇಮಿಸಿದ್ದು, ಪ್ರತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಪ್ರಯತ್ನ ನಡೆಯುತ್ತಿದೆ ಎಂದರು.

ರಂಗನಾಥ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮಂಟಪದ ಮೇಲೆ ಬೆಳೆದಿದ್ದ ಗಿಡಗೆಂಟೆಗಳನ್ನು ಸ್ವಚ್ಛಗೊಳಿಸಿದರು. ಮಂಟಪದ ಅಭಿವೃದ್ಧಿಗೆ ದಾನಿಗಳು ನೆರವು ನೀಡಲು ಮುಂದೆ ಬಂದಿದ್ದಾರೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಸಂದೇಶ್ ಹೇಳಿದರು. ಕೆ.ಎನ್.ಕುಮಾರಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT