ADVERTISEMENT

ಪುಟ್ಟಣ್ಣಯ್ಯರಿಂದ ವಿನಾಕಾರಣ ಗೊಂದಲ: ಜೆಡಿಎಸ್ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 6:10 IST
Last Updated 25 ಜನವರಿ 2012, 6:10 IST

ಪಾಂಡವಪುರ: ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಭಾರತ್ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸದಿದ್ದರೂ ಕೆಲವರು ಅನಗತ್ಯವಾಗಿ ಗೊಂದಲ ಎಬ್ಬಿಸುತ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 12 ಗಂಟೆಗೆ ಗ್ರಾಮ ಪಂಚಾಯಿತಿ ಮುಂದೆ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು, ಕೆಲ ರಾಜಕಾರಣಿಗಳು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಶಿಲಾನ್ಯಾಸದಲ್ಲಿ ನಮೂದಿಸಿರುವ ಜೆಡಿಎಸ್ ಮುಖಂಡ ಕಾಡೇನಹಳ್ಳಿ ರಾಮಚಂದ್ರು ಗ್ರಾ.ಪಂನ ಮಾಜಿ ಉಪಾಧ್ಯಕ್ಷರು, ಮತ್ತೊಬ್ಬ ಜೆಡಿಎಸ್ ಮುಖಂಡ ಚಂದ್ರಶೇಖರ್ ಜನಪ್ರತಿನಿಧಿಗಳಾಗಿಲ್ಲದಿದ್ದರೂ ಗ್ರಾ.ಪಂ. ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವತ ಸಹಾಯಧನ ನೀಡಿದ್ದಾರೆ. ಗ್ರಾ.ಪಂ ಅನ್ನು ಜೆಡಿಎಸ್ ಕಚೇರಿಯಾಗಿ ಮಾರ್ಪಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೂಡ ನಿರಾಧಾರ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಕಾಡೇನಹಳ್ಳಿ ರಾಮಚಂದ್ರು. ರೈತ ಸಂಘದ ಪುಟ್ಟಣ್ಣಯ್ಯ ರೈತರಪರ ಹೋರಾಟ ನಡೆಸುವುದನ್ನು ಬಿಟ್ಟು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪುಟ್ಟಣ್ಣಯ್ಯ ಹೆಸರನ್ನು ಕ್ಯಾತನಹಳ್ಳಿ ಗ್ರಾ.ಪಂ.ನ ಶಿಲಾನ್ಯಾಸದಲ್ಲಿ ನಮೂದಿಸಿದ್ದಾರೆ. ಅವರೇನು ಜನಪ್ರತಿನಿಧಿಗಳೇ, ಮೊದಲು ಅದನ್ನು ತೆರವುಗೊಳಿಸಲಿ. ನಂತರ ಜಕ್ಕನಹಳ್ಳಿ ಗ್ರಾ.ಪಂ.ಬಗ್ಗೆ ಮಾತನಾಡಲಿ ಎಂದ ಅವರು, ಯಾವುದೇ ಕಾರಣಕ್ಕೂ ಶಿಲಾನ್ಯಾಸ ತೆರವುಗೊಳಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ತಾ.ಪಂ ಮಾಜಿ ಸದಸ್ಯ ಬೆಟ್ಟಸ್ವಾಮಿಗೌಡ, ಗ್ರಾ.ಪಂ.ಸದಸ್ಯರಾದ ಧರ್ಮೇಗೌಡ, ನಿಂಗರಾಜು, ಜೆಡಿಎಸ್ ಮುಖಂಡ ಸೋಮ, ರಾಮಕೃಷ್ಣ, ಜಯರಾಮ, ನಡಕೇರಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.