ADVERTISEMENT

ಪ್ರವಾಸಿಗರನ್ನು ಸೆಳೆಯಲು ಕಾರ್ಯಕ್ರಮ: ಸಲಹೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 8:35 IST
Last Updated 10 ಫೆಬ್ರುವರಿ 2011, 8:35 IST

ಕೃಷ್ಣರಾಜಪೇಟೆ : ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುವ ಮೂಲಕ ಹೊರಗಿನ ಪ್ರವಾಸಿಗರನ್ನು ಇಲ್ಲಿಗೆ ಸೆಳೆಯಲು ಶೀಘ್ರವಾಗಿ ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಶಾಸಕ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದರು.

ಪಟ್ಟಣ ಹೊಸ ಕಿಕ್ಕೇರಿ ರಸ್ತೆಯಲ್ಲಿ ಪ್ರವಾಸೋದ್ಯಮ ಇಲಖೆ ಸಹಯೋಗದೊಂದಿಗೆ ಆರಂಭಗೊಂಡಿರುವ ನೂತನ ರೆಸ್ಟೋರೆಂಟ್‌ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಬೇರೆ ಕಡೆಗಿಂತ ಉತ್ತಮ ಕಲಾವೈಭವವನ್ನು ಹೊಂದಿರುವ ಪ್ರವಾಸಿ ತಾಣಗಳು ತಾಲ್ಲೂಕಿನಲ್ಲಿವೆ. ಜೈನ ಇತಿಹಾಸ ಸಾರುವ ಬಸ್ತಿಹೊಸಕೋಟೆಯ ಗೊಮ್ಮಟ, ಹೊಯ್ಸಳ ಶಿಲ್ಪಕಲೆಯ ಖ್ಯಾತಿಯ ಹೊಸಹೊಳಲು ಲಕ್ಷ್ಮೀನಾರಾಣಸ್ವಾಮಿ ದೇವಾಲಯ, ಏಷ್ಯಾದಲ್ಲಿಯೇ ದೊಡ್ಡ ಏಕಶಿಲಾ ವಿಗ್ರಹ ಎಂಬ ಖ್ಯಾತಿಯ ವರಹನಾಥಕಲ್ಲಹಳ್ಳಿಯ ಭೂವರಹನಾಥಸ್ವಾಮಿ ದೇವಾಲಯ ಸೇರಿದಂತೆ ಅನೇಕ ಆಕರ್ಷಕ ತಾಣಗಳು ತಾಲ್ಲೂಕಿನಲ್ಲಿವೆ. ಆದರೆ ಪ್ರಚಾರದ ಕೊರತೆ, ಸೌಲಭ್ಯಗಳ ಮತ್ತು ಅಭಿವೃದ್ಧಿಯ ಹಿನ್ನಡೆಯಿಂದ ಇವುಗಳೆಡೆಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನ ನೀಡಬೇಕು ಎಂದು ಅವರು ಹೇಳಿದರು.

ಮಾಜಿ ಶಾಸಕ ಬಿ.ಪ್ರಕಾಶ್, ತಾ.ಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿರಾಜಶೇಖರ್, ಮಾಜಿ ಸದಸ್ಯ ರಾಮಸ್ವಾಮಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಜಯರಾಮು, ಪುರಸಭಾಧ್ಯಕ್ಷ ಚಂದ್ರೇಗೌಡ, ಜಿಲ್ಲಾ ವರ್ತೂರು ಪ್ರಕಾಶ್ ಯುವಸೇನೆ ಅಧ್ಯಕ್ಷ ಕೆ.ಜೆ.ವಿಜಯಕುಮಾರ್ ಮತ್ತಿತರರು ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.