ADVERTISEMENT

ಬತ್ತ ಪರೀಕ್ಷೆಗೆ ಸೂಚನೆ: ಜಿಪಂ ಸಿಇಓ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:00 IST
Last Updated 14 ಜೂನ್ 2011, 9:00 IST

ಮಂಡ್ಯ: ಜಿಲ್ಲೆಯಲ್ಲಿ ಕಳೆದ ವರ್ಷ ಕಳಪೆ ಗುಣಮಟ್ಟದ ಬತ್ತ ಪೂರೈಕೆಯಾಗಿದ್ದ ಹಿನ್ನೆಲೆಯಲಿ ನಡೆದ ಪ್ರತಿಭಟನೆ, ರೈತರಿಗಾದ ನಷ್ಟವನ್ನು ಗಮನದಲ್ಲಿ ಇಟ್ಟುಕೊಂಡು, ಈ ಬಾರಿ ಪೂರೈಸಲಿರುವ ಬತ್ತವನ್ನು ಪರೀಕ್ಷೆಗೊಳಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಯರಾಂ ಅವರು ಕೃಷಿ ಇಲಾಖೆಗೆ ಸೂಚಿಸಿದ್ದಾರೆ.

ಕಳೆದ ಬಾರಿ ಕಳಪೆ ಗುಣಮಟ್ಟದ ಬತ್ತದ ಬಿತ್ತನೆ ಬೀಜ ಪೂರೈಕೆಯಾಗಿ  ರೈತರಿಂದ ತೀವ್ರ ಪ್ರತಿಭಟನೆ ನಡೆದರೂ ಇನ್ನೂ ಆ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದರ ಬಗೆಗೂ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಶಿವಣ್ಣ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಳಂಬವಾಗಿ ಮುಂಗಾರು ಕೃಷಿ ಹಂಗಾಮು ಆರಂಭವಾಗುತ್ತದೆ ಎಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಬೀಜ ಪೂರೈಕೆ ಆಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಕಳೆದ ಬಾರಿ ಕಳಪೆ ಬೀಜ ಪೂರೈಸಿದ್ದು, ರೈತ ಪ್ರತಿಭಟನೆ ಉಲ್ಲೇಖಿಸಿದ ಅವರು ಆ ಸಂಸ್ಥಗಳ ಮೇಲೆ ಏನೂ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ, ಕೃಷಿಇಲಾಖೆ ಅಥವಾ ಬೀಜ ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ಸಿಗಲಿಲ್ಲ. ಗುಣಮಟ್ಟದ ಬಿತ್ತನೆ ಬೀಜ ಪೂರೈಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾದಪ್ಪ ಮತ್ತು ಮಂಚೇಗೌಡ ಅವರೂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಂಟಿ ಕೃಷಿ ನಿರ್ದೇಶಕ ಸಂಗಯ್ಯ ಅವರು, ರಾಜ್ಯ ಸರ್ಕಾರದ ಅಧೀನದ ಸಂಸ್ಥೆಗಳೇ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಪೂರೈಸಲಿದೆ. ಗುಣಮಟ್ಟದ ತಪಾಸಣೆ ನಡೆಸಿಯೇ ಪೂರೈಸಲಿವೆ. ಆದರೂ, ಲೋಪ ಕಂಡುಬಂದ ಸಂದರ್ಭಗಳಲಿ ನೋಟಿಸ್ ನೀಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಜಿಲ್ಲೆಯ ಬೇಡಿಕೆಯನ್ನು ಗಮನದಲ್ಲಿ ಇಟ್ಟು ಕೊಂಡು ಈ ಬಾರಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಒದಗಿಸಲು ಇಲಾಖೆ ಸಜ್ಜಾಗಿದೆ. ಈಗಾಗಲೇ ಇಲಾಖೆಯಿಂದ ಅಲಸಂದೆಬೀಜ ವಿತರಿಸಲಾಗಿದೆ. ಜುಲೈ ಮೊದಲ ವಾರ ಕೃಷಿ ಚಟುವಟಿಕೆ ಆರಂಭವಾಗಲಿದ್ದು, ಆ ವೇಳೆಗೆ ಬಿತ್ತನೆ ಬೀಜ ಪೂರೈಸಲಾಗುವುದು ಎಂದರು.

ಸುವರ್ಣ ಭೂಮಿ: ಸುವರ್ಣ ಭೂಮಿ ಯೋಜನೆಯಡಿ ಎಲ್ಲ ಅರ್ಹ ರೈತರಿಗೂ  ಆರ್ಥಿಕ ನೆರವು ನೀಡಬೇಕು ಎಂಬ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾದಪ್ಪ, ಮಂಚೇಗೌಡ ಅವರ ಸಲಹೆಯನ್ನು ತಳ್ಳಿಹಾಕಿದ ಅವರು, ಇದು ಸರ್ಕಾರದ ನೀತಿ. ಇಲಾಖೆಗೆ ಬಂದಿರುವ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಎಲ್ಲರಿಗೂ ಸೌಲಭ್ಯ ವಿತರಿಸ ಬೇಕು ಎಂದು ನಿಲುವಳಿ ಅಂಗೀಕರಿಸಿ ಸರ್ಕಾರಕ್ಕೆ ಈ ಬಗೆಗೆ ಸಲಹೆ ಕಳುಹಿಸಬಹುದು ಎಂದರು.

ಗಂಗಾ ಕಲ್ಯಾಣ ಯೋಜನೆ: ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕೊಡುವ ವಿಷಯವು ತೀವ್ರ ಚರ್ಚೆಗೆ ಆಸ್ಪದವಾಯಿತು.

ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಣ ಪಾವತಿಸದ ಕಾರಣ ಕೆಲ ಕೊಳವೆ ಬಾವಿಗಳಿಗೆ ಸಂಪರ್ಕ ಒದಗಿಸಲು ಆಗ್ಲ್ಲಿಲ ಎಂದು ಚೆಸ್ಕಾಂ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.