ADVERTISEMENT

ಬನ್ನಿಮಂಟಪಕ್ಕೆ ಸ್ಥಳೀಯರಿಂದ ಬಣ್ಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:20 IST
Last Updated 19 ಅಕ್ಟೋಬರ್ 2012, 8:20 IST

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಕಿರಂಗೂರು ವೃತ್ತದ ಬಳಿ ಇರುವ ದಸರಾ ಬನ್ನಿ ಮಂಟಪಕ್ಕೆ ಸ್ಥಳೀಯರು ಸುಣ್ಣ ಬಳಿಯುವ ಔದಾರ್ಯಕ್ಕೆ ಮುಂದಾಗಿದ್ದಾರೆ.


ಬೆಂಗಳೂರು- ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ 15ನೇ ಶತಮಾನದ ಮಂಟಪಕ್ಕೆ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್ ರೂ.10 ಸಾವಿರ ಖರ್ಚು ಮಾಡಿ ಬಣ್ಣ ಬಳಿಸುತ್ತಿದ್ದಾರೆ.

ಮಂಟಪದ ಮುಂದಿನ ಗುಂಡಿಗಳಿಗೆ ಮಣ್ಣು ತುಂಬಿಸಿ ತಗ್ಗು ಮುಚ್ಚಿಸಿದ್ದಾರೆ. ದಸರಾ ಉತ್ಸವಕ್ಕೆ ಸಾಕ್ಷಿ ಆಗಲಿರುವ ಈ ಮಂಟಪದ ಮುಂದೆ ಬಾಬುರಾಯನಕೊಪ್ಪಲಿನ ಬಿ.ಎಂ.ಸುಬ್ರಹ್ಮಣ್ಯ ಕುಟುಂಬದವರು ಬನ್ನಿ (ಶಮೀ) ವೃಕ್ಷ ಬೆಳೆಸಿ ಪೋಷಿಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಆಡಳಿತ ಆಸಕ್ತಿ ವಹಿಸಿ ಈ ಪಾರಂಪರಿಕ ಮಂಟಪವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಂದೇಶ್, ಸುಬ್ರಹ್ಮಣ್ಯ ಇತರರು ಒತ್ತಾಯಿಸಿದ್ದಾರೆ.

ಪಟ್ಟಣ ಪುರಸಭೆ ಗುರುವಾರ ಈ ಮಂಟಪದ ಆಸುಪಾಸಿನಲ್ಲಿ ಬೆಳೆದಿದ್ದ ಗಿಡ, ಗಂಟಿಗಳನ್ನು ಕಿತ್ತು ಹಸನು ಮಾಡಿದೆ. ಮುಖ್ಯಾಧಿಕಾರಿ ರಾಜಣ್ಣ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಜಂಬೂ ಸವಾರಿ ಆರಂಭವಾಗುವ ಸಮಯದಲ್ಲಿ ಸುಮಾರು ಒಂದೂವರೆ ಸಾವಿರ ಜನರು ಮಂಟಪದ ಬಳಿ ನೆರೆಯುವ ನಿರೀಕ್ಷೆ ಇದೆ. ಜಿಲ್ಲೆಯ ಜನರಿಗೆ ದಸರಾ ಉತ್ಸವದ ಆಹ್ವಾನ ನೀಡಲಾಗುತ್ತಿದೆ. ದಸರಾ ಬನ್ನಿ ಮಂಟಪದಿಂದ ಅ.20ರಂದು ಮಧ್ಯಾಹ್ನ 3 ಗಂಟೆಗೆ ಜಂಬೂ ಸವಾರಿ ಆರಂಭವಾಗಲಿದ್ದು, ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ್ ಅರುಳ್‌ಕುಮಾರ್ ಕೋರಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.