ADVERTISEMENT

ಭ್ರಷ್ಟಾಚಾರ: ಮಾಜಿ ಸ್ಪೀಕರ್‌ರ ಗಡುವು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:25 IST
Last Updated 3 ಜೂನ್ 2011, 6:25 IST

ಮಂಡ್ಯ: ಸ್ವಚ್ಛ ಗ್ರಾಮ ಯೋಜನೆಯಡಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಲ್ಲಿ ಪರಿಕರಗಳನ್ನು ಖರೀದಿಸುವಲ್ಲಿ ಆಗಿರುವ ವ್ಯಾಪಕ ಭ್ರಷ್ಟಾಚಾರದ ತನಿಖೆಗೆ ಆಗ್ರಹಪಡಿಸಿ ಅನಿರ್ದಿಷ್ಟ ಧರಣಿ ಮಾಡುವ ಬೆದರಿಕೆ ಹಾಕಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರು ಮತ್ತೆ ಗಡುವು ವಿಸ್ತರಿಸಿದ್ದಾರೆ.

ತಿಂಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಂತೆ ತಾಲ್ಲೂಕು ಪಂಚಾಯಿತಿಗಳಲಿ ಹಿಂದಿನ ಚುನಾಯಿತ ಸದಸ್ಯರ ಅವಧಿಯಲ್ಲಿ ಮತ್ತುಮುಡಾ ನಿವೇಶನ ಹಂಚಿಕೆಯಲ್ಲಿ ಆಗಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಲು ಸರ್ಕಾರಕ್ಕೆ ನೀಡಿದ್ದ ತಿಂಗಳ ಗಡುವು ಮಂಗಳವಾರವೇ ಮುಗಿದಿದೆ.

ಆದರೆ, ಸರ್ಕಾರ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಬೆಳವಣಿಗೆ ಆಗಿಲ್ಲ. ಇತ್ತ ಮಾಜಿ ಸ್ಪೀಕರ್ ಅವರು ಎಚ್ಚರಿಕೆ ನೀಡಿದ್ದಂತೆ ಅನಿರ್ದಿಷ್ಟ ಧರಣಿ ಆರಂಭವಾಗಿಲ್ಲ.

ಈ ಕುರಿತು ಸಂಪರ್ಕಿಸಿದಾಗ ಕೃಷ್ಣ ಅವರು, `ಒಂದು ತಿಂಗಳು ಗಡುವು ನೀಡಿದ್ದು ನಿಜ. ಈ ಪ್ರಕರಣಗಳ ಬಗೆಗೆ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸಚಿವರಿಗೆ ಪತ್ರವನ್ನು ಬರೆದಿದ್ದೆ. ಅವರು ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಕಾದು ನೋಡೋಣ~ ಎಂದು ಪ್ರತಿಕ್ರಿಯಿಸಿದರು.

ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಈ ಇಬ್ಬರು ಸಚಿವರನ್ನು ಭೇಟಿಯಾಗಿ ಪ್ರಸ್ತಾಪಿತ ಪ್ರಕರಣಗಳ ಬಗೆಗೆ ತನಿಖೆ ನಡೆಸಬೇಕು ಎಂದು ಆಗ್ರಹಪಡಿಸುತ್ತೇನೆ. ಕ್ರಮ ಕೈಗೊಳ್ಳದಿದ್ದರೆ ಇಲ್ಲದಿದ್ದರೆ ಆ ಸಚಿವರುಗಳ ಕಚೇರಿ ಎದುರೇ ಧರಣಿ ನಡೆಸುತ್ತೇನೆ ಎಂದು ಸ್ಪಷ್ಪಪಡಿಸಿದರು.

ಈಗ ಎಷ್ಟು ದಿನ ಗಡುವು ನೀಡಲಾಗುವುದು ಮತ್ತು ಎಂದಿನಿಂದ ಧರಣಿ ಆರಂಭವಾಗಲಿದೆ ಎಂದು ಖಚಿತವಾಗಿ ಪ್ರಕಟಿಸದ ಅವರು, `ಈಗ ಸಚಿವರು ಭರವಸೆ ನೀಡಿದ್ದಾರೆ. ಲೆಟ್ಸ್ ವೇಯ್ಟ ಅಂಡ್ ಸೀ~ ಎಂದರು.

ಜಿಲ್ಲೆಯ ಏಳು ತಾಲ್ಲೂಕು ಪಂಚಾಯಿತಿಗಳಲ್ಲಿ ಈ ಹಿಂದಿನ ಚುನಾಯಿತ ಜನ ಪ್ರತಿನಿಧಿಗಳ ಅವಧಿಯಲ್ಲಿ ಸ್ವಚ್ಛಗ್ರಾಮ ಯೋಜನೆಯಡಿ ಸುಮಾರು ರೂ. 2 ಕೋಟಿ ಮೌಲ್ಯದ ಪರಿಕರ ಖರೀದಿಸಿದ್ದು, ವ್ಯಾಪಕ ಭ್ರಷ್ಟಾಚಾರ ಆಗಿದೆ. ಜಿಪಂ ಸಿಇಒ ಅವರೇ ವರದಿ ಕಳುಹಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ತಿಂಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಅನಿರ್ದಿಷ್ಟ ಧರಣಿ ನಡೆಸುತ್ತೇನೆ ಎಂದು ಕೃಷ್ಣ ಸುದ್ದಿಗೋಷ್ಠಿಯಲ್ಲಿ  ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.