ADVERTISEMENT

ರಂಜಿಸಿದ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 19:30 IST
Last Updated 21 ನವೆಂಬರ್ 2011, 19:30 IST
ರಂಜಿಸಿದ ಕುಸ್ತಿ ಪಂದ್ಯಾವಳಿ
ರಂಜಿಸಿದ ಕುಸ್ತಿ ಪಂದ್ಯಾವಳಿ   

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳದಲ್ಲಿ ಹಿರಿದೇವಿಯಮ್ಮನ ಉತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ, ಕಾಳಾಚಾರಿ ಗರಡಿಯ ಪೈ.ಶಿವಣ್ಣ ಸ್ಮರಣಾರ್ಥ ನಡೆದ ಕುಸ್ತಿ ಪಂದ್ಯಾವಳಿ ಪ್ರೇಕ್ಷಕರನ್ನು ರಂಜಿಸಿತು.

ಗ್ರಾಮದ ಕುಲಸ್ಥರು ಸರದಿಯಂತೆ ದೇವಿಗೆ ಪೂಜೆ ಸಲ್ಲಿಸಿದರು. ಮೂಲ ವಿಗ್ರಹಕ್ಕೆ ಅಭಿಷೇಕ ನಡೆಯಿತು. ಭಾನುವಾರ ತಡರಾತ್ರಿವರೆಗೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಹರಕೆ ಹೊತ್ತವರು ಧೂಪ, ದೀಪ ಬೆಳಗಿದರು. ಬೆಳಗೊಳ ಅಷ್ಟೇ ಅಲ್ಲದೆ, ಹುಲಿಕೆರೆ, ಹೊಸ ಉಂಡವಾಡಿ, ಕೆಆರ್‌ಎಸ್, ಮಜ್ಜಿಗೆಪುರ, ಪಾಲಹಳ್ಳಿ, ಪಿ.ಹೊಸಹಳ್ಳಿ, ಹೊಸ ಆನಂದೂರು ಇತರ ಗ್ರಾಮಗಳ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಗದಗ್‌ನ ಪೈ.ರಮೆಶ್ ಲಕ್ಕುಂಡಿ ಮತ್ತು ರಮ್ಮನಹಳ್ಳಿಯ ಪೈ.ಶಿವು ನಡುವೆ ಮಾರ್ಫಿಟ್ ಕುಸ್ತಿ ನಡೆಯಿತು. ಈ ಜೋಡಿ ಸುಮಾರು ಒಂದು ತಾಸು ಕೆಮ್ಮಣ್ಣು ಮಟ್ಟಿಯ ಮೇಲೆ ಗುದ್ದಾಟ ನಡೆಸಿತು. ಅಂತಿಮವಾಗಿ ಪೈ.ಶಿವ ಜಯಗಳಿಸಿದರು. 25ಕ್ಕೂ ಹೆಚ್ಚು ಜೋಡಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಜಿ.ಪಂ. ಸದಸ್ಯ ಬಿ.ಟಿ.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಬಿ.ಎಂ.ಸ್ವಾಮಿಗೌಡ, ಬಿ.ವಿ.ಲೋಕೇಶ್ ಇತರರು ಇದ್ದರು.

ಪಾಲಹಳ್ಳಿಯಲ್ಲಿ ಕುಸ್ತಿ: ತಾಲ್ಲೂಕಿನ ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನ.22ರಂದು ಕುಸ್ತಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ 20 ಜತೆ ಕಾಟಾ ಕುಸ್ತಿ ಏರ್ಪಡಿಸಲಾಗಿದೆ.

ಮಧ್ಯಾಹ್ನ 2 ಗಂಟೆಗೆ ಪಂದ್ಯಾವಳಿ ಶುರುವಾಗಲಿದೆ. ಪಾಲಹಳ್ಳಿ ಪೈ.ನಾಗರಾಜು ಮತ್ತು ನಂಜನಗೂಡಿನ ಪೈ.ಸ್ಟಾರ್ ಸುರೇಶ್ ಹಾಗೂ ಮೈಸೂರಿನ ಪೈ.ನಿಸಾರ್ ಅಹಮದ್ ಖಾದ್ರಿ- ಬೆಳಗೊಳದ ಪೈ.ಧನಂಜಯ ಇತರ ಪ್ರಮುಖ ಜೋಡಿಗಳು ಸೆಣೆಸಾಟ ನಡೆಸಲಿವೆ ಎಂದು ಕುಸ್ತಿ ಪಂದ್ಯಾವಳಿ ಆಯೋಜಕ ಪೈ.ರಾಜಣ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.