ಮಂಡ್ಯ: ‘ಮಾಜಿ ಸಂಸದೆ ರಮ್ಯಾ ಅವರಿಗೆ ಯಾವ ಹುದ್ದೆ ನೀಡಿದರೂ ಸಂತೋಷ. ಅವರನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಸಚಿವರನ್ನಾಗಿ ಮಾಡುವ ತೀರ್ಮಾನವನ್ನು ಪಕ್ಷದ ವರಿಷ್ಠರು ಕೈಗೊಳ್ಳಬೇಕು. ಅದು ನನ್ನ ಕೈಯಲ್ಲಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಮೀಪದ ಸ್ವರ್ಣಸ್ವಂದ್ರದಲ್ಲಿ ನಗರಸಭೆ ಹಮ್ಮಿಕೊಂಡ ‘ಸಸಿ ನೆಡುವ ಯೋಜನೆ’ಗೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರು ಸಸಿ ನೆಡುವ ಮೂಲಕ ಗುರುವಾರ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
‘ಮಂಡ್ಯದವರಿಗೆ ಯಾವುದೇ ಅಧಿಕಾರ ನೀಡಿದರೂ ನನಗೆ ಬೇಜಾರಿಲ್ಲ. ರಮ್ಯಾ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಕೆಲವರು ನಿಯೋಗ ತೆರಳಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.
ಆತಂಕ ಇಲ್ಲ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಯಾವುದೇ ಅಡ್ಡಿ, ಆತಂಕಗಳು ಎದುರಾಗುವುದಿಲ್ಲ ಎಂದು ಭಾವಿಸಿದ್ದೇನೆ. ನಗರದ ರಸ್ತೆ ಬದಿಯಲ್ಲಿ ಸರ್ಕಾರಿ ಕಚೇರಿಗಳೇ ಹೆಚ್ಚಿವೆ. ಅವುಗಳ ಕಾಂಪೌಂಡ್ ಕೆಡವಬೇಕಾಗಬಹುದು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜತೆಯಲ್ಲಿಯೇ ಬೈಪಾಸ್ ನಿರ್ಮಾಣ ಕಾಮಗಾರಿಯೂ ನಡೆಯಲಿದೆ. ನಗರ ಅಥವಾ ಪಟ್ಟಣಗಳ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಸಾಧ್ಯ. ಹೀಗಾಗಿ, ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ ಎಂದರು.
ಬೆಂಗಳೂರು– ಮೈಸೂರು ನಡುವಿನ ಬಹುತೇಕ ಪಟ್ಟಣ, ನಗರಗಳ ಪ್ರಮುಖ ಬೇಡಿಕೆಯಂತೆ ಬೈಪಾಸ್ ನಿರ್ಮಾಣ ಯೋಜನೆಗೂ ಚಾಲನೆ ಸಿಗುತ್ತಿದೆ. ಮಂಡ್ಯದಲ್ಲಿ ಬೈಪಾಸ್ ಜತೆಗೆ ಫ್ಲೈ ಓವರ್ ನಿರ್ಮಾಣ ಮಾಡಬೇಕು ಎಂಬುದು ನನ್ನ ಆಸೆಯಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಕೆರಗೋಡು ಸೋಮಶೇಖರ್್, ಅರುಣ್ಕುಮಾರ್, ಮುಖಂಡರಾದ ಅಮರಾವತಿ ಚಂದ್ರಶೇಖರ್್್, ಜಿ.ಸಿ. ಆನಂದ್್, ಬೇಲೂರು ಸೋಮಶೇಖರ್್, ಆಯುಕ್ತ ಶಶಿಕುಮಾರ್, ಕಾರ್ಯಪಾಲಕ ಎಂಜಿನಿಯರ್ ಚನ್ನಯ್ಯ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.