ಮಂಡ್ಯ: ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಜಾರಿಗೆ ತಂದಿರುವ ಕಾಯಿದೆಯ ಫಲ ಪ್ರತಿಯೊಬ್ಬರಿಗೂ ದೊರಕಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವಾಸುದೇವ ಶರ್ಮ ಅವರು ಹೇಳಿದರು.
ನಗರದಲ್ಲಿ ಶುಕ್ರವಾರ ಬೆಂಗಳೂರಿನ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ಭೀಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ `ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2009~ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಿಕ್ಷಣ ವಂಚಿತ ಮಕ್ಕಳಿಗೆ ಈ ಕಾಯಿದೆ ನೆರವಾಗಿದೆ. ಶಿಕ್ಷಣ ಎಲ್ಲ ತಾರತಮ್ಯವನ್ನು ನಿವಾರಿಸುವ ಸಾಧನವಾಗಿದ್ದು, ಮಕ್ಕಳ ಮೇಲಿನ ಅನ್ಯಾಯ ಮತ್ತು ಶೋಷಣೆಯನ್ನು ತಪ್ಪಿಸಬಹುದಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ, ಅವರ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, `ಶೇ 10ಕ್ಕಿಂತ ಕಡಿಮೆ ಮಕ್ಕಳನ್ನು ಹೊಂಡಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಉದ್ದೇಶಿಸಿರುವುದು ಸರಿಯಲ್ಲ. ಈ ಬಗೆಗೆ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು~ ಎಂದು ಹೇಳಿದರು.
ಶಿಕ್ಷಕರು ವಿದ್ಯಾರ್ಥಿಗಳ ಬಗೆಗೆ ದ್ವೇಷ ಅಥವಾ ಅಸೂಯೆ ಹೊಂದಿರುವುದಿಲ್ಲ. ದಾರಿ ತಪ್ಪಿದಾಗ ಅಥವಾ ಕಲಿಕೆಯತ್ತ ಆಸಕ್ತಿ ವಹಿಸಲಿ ಎಂಬ ಉದ್ದೇಶದಿಂದ ಒಂದೆರಡು ಏಟು ನೀಡಬಹುದು. ಆದರೆ, ಈ ವಿಚಾರವನ್ನೇ ದೊಡ್ಡದ್ದು ಮಾಡಿ ಶಿಕ್ಷಕರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಾದ ಕ್ರಮವಲ್ಲ~ ಎಂದರು.
ಮಂಡ್ಯ ಉತ್ತರ ವಲಯ ಬಿಇಒ ಕೆ.ಕೋದಂಡರಾಮ್, ಸರ್ವ ಶಿಕ್ಷಣ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಧನಂಜಯ, ಭೀಮ್ ಸಂಸ್ಥೆಯ ಮಿಕ್ಕೆರೆ ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.