ಶ್ರೀರಂಗಪಟ್ಟಣ: ಲೋಕ ಕಲ್ಯಾಣಕ್ಕಾಗಿ ಹಾಸನದ ದೊಡ್ಡಪುರ ಅವಧೂತ ಆಶ್ರಮದಲ್ಲಿ ನವೆಂಬರ್ ಕೊನೆ ವಾರ ನಡೆಯಲಿರುವ ಸಾಂಕೇತಿಕ ಅಶ್ವಮೇಧ ಯಾಗದ ಕುದುರೆ ಹಾಗೂ ಶ್ರೀರಾಮ ರಥ ಗುರುವಾರ ಪಟ್ಟಣಕ್ಕೆ ಆಗಮಿಸಿತು.
ಇಲ್ಲಿಗೆ ಸಮೀಪದ ನಿಮಿಷಾಂಬ ದೇವಾಲಯ ಬಳಿ ಮಹಾಬಲೇಶ್ವರ ಕೆ.ಭಟ್ ಹಾಗೂ ಇತರರು ಯಾಗದ ಕುದುರೆ ಹಾಗೂ ಶ್ರೀರಾಮ ರಥವನ್ನು ಬರಮಾಡಿಕೊಂಡರು. ಮೇ 6ರಂದು ದೊಡ್ಡಪುರ ಆಶ್ರಮದಿಂದ ಹೊರಟಿ ರುವ ಅಶ್ವಮೇಧ ಕುದುರೆ ನವೆಂಬರ್ ಕೊನೆಯ ವಾರದವರೆಗೆ ರಾಜ್ಯದ ವಿವಿಧೆಡೆ ಸಂಚರಿಸಲಿದೆ. ಶ್ರೀರಾಮ, ಧರ್ಮರಾಯರು ಅಸುರೀ ಗುಣಗಳ ನಿಗ್ರಹಕ್ಕಾಗಿ ಅಶ್ವಮೇಧ ಯಾಗ ಮಾಡಿದ್ದಾರೆ.
ಮಳೆ, ಬೆಳೆ, ಜನರ ಆರೋಗ್ಯ, ಆಹಾರ ದೋಷ, ಪ್ರಕೃತಿ ವಿಕೋಪಗಳನ್ನು ತಡೆಯುವ ಸಂಕಲ್ಪ ದೊಡನೆ ಅಶ್ವಮೇಧ ಯಾಗದ ಪ್ರದಕ್ಷಿಣೆ ಶುರುವಾಗಿದೆ ಎಂದು ಅಶ್ವಮೇಧ ರಥದ ನೇತೃತ್ವ ವಹಿಸಿರುವ ಶ್ರೀರಾಮ ಅವಧೂತರು ತಿಳಿಸಿದರು. ಹರಿಹರದ ನಾರಾಯಣ ಮಹಾರಾಜರ ಪರಂಪರೆಯಂತೆ ಸಾಂಕೇತಿಕ ಅಶ್ವಮೇಧ ಯಾಗ ನಡೆಸಲಾಗುತ್ತಿದೆ. ನವೆಂಬರ್ ಅಂತ್ಯದಲ್ಲಿ 12 ದಿನಗಳ ಕಾಲ ಯಾಗ ನಡೆಯಲಿದ್ದು, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲಿ ಈ ಅಶ್ವಮೇಧ ರಥಯಾತ್ರೆ ನಡೆಸಿ ಜಾಗೃತಿ ಮೂಡಿಸಲಾಗುವುದು. ಅಶ್ವಮೇಧ ಕುದುರೆ ಶುಕ್ರವಾರ ಮೈಸೂರಿಗೆ ತೆರಳಲಿದೆ ಎಂದರು. ಶ್ರೀನಿವಾಸ ಮೂರ್ತಿ, ಶ್ರೀಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.