ಮಂಡ್ಯ: ಮಹಾಶಿವರಾತ್ರಿ ಹಬ್ಬವನ್ನು ಬುಧವಾರ ನಗರ, ಜಿಲ್ಲೆಯ ವಿವಿಧೆಡೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗಿದ್ದು ಜಿಲ್ಲೆಯ ಪ್ರಮುಖ ಹನುಮಂತನಗರದ ಆತ್ಮಲಿಂಗೇ ಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಗುಲಗಳಲ್ಲಿ ಮುಖ್ಯವಾಗಿ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿ ಸಲಾಗಿದ್ದು, ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮದ್ದೂರು ತಾಲ್ಲೂಕು ಹನುಮಂತನಗರದ ಆತ್ಮಲಿಂಗೇಶ್ವರ ದೇವಾಲಯದ ಆವರಣ ದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ದನಗಳ ಜಾತ್ರೆ ನಡೆಯಿತು.
ದೇವರಿಗೆ ವಿಶೇಷ ಅಲಂಕಾರ ಮಾಡಲಾ ಗಿದ್ದು, ರಾತ್ರಿ ಬಹು ಹೊತ್ತಿನವರೆಗೂ ಭಜನೆ, ಹರಿಕಥೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಗರದಲ್ಲಿಯೂ ಓಲ್ಡ್ಟೌನ್ನ ಈಶ್ವರ ದೇವಸ್ಥಾನ, ಕಲ್ಲಹಳ್ಳಿ ಬಡಾವಣೆಯಲ್ಲಿರುವ ಈಶ್ವರ ದೇವಸ್ಥಾನ, ಬನ್ನೂರು ರಸ್ತೆಯ ಲ್ಲಿರುವ ಶನೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕಲ್ಲಂಗಡಿ ಮಾರಾಟದ ಭರಾಟೆ: ಶಿವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿಯೇ ಫಲ ಕೈಗೆ ಬರುವ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಸಹಜವಾಗಿಯೇ ಬೆಲೆಯೂ ಹೆಚ್ಚಾಗಿತ್ತು.ವಿ.ವಿ.ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಅನುಸಾರ, ಕಲ್ಲಂಗಡಿ ಹಣ್ಣು ಗಳು ತಮಿಳುನಾಡಿನಿಂದ ಬರಲಿದ್ದು, ಈ ಬಾರಿ ಬೇಡಿಕೆಯು ಹೆಚ್ಚಿದೆ. ಕೆ.ಜಿ.ಗೆ 15 ರಿಂದ 20 ರೂಪಾಯಿ ಇತ್ತು. ದರ ದುಬಾರಿ ಎನಿಸಿದರೂ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿತ್ತು.
ಶಿವನಾಮ ಸ್ಮರಣೆ
ಕಿಕ್ಕೇರಿ: ಹೋಬಳಿಯ ವಿವಿಧೆಡೆಯ ಶಿವಾ ಲಯಗಳಲ್ಲಿ ಬುಧವಾರ ಮಹಾ ಶಿವರಾತ್ರಿ ಅಂಗವಾಗಿ ಸಂಭ್ರಮದಿಂದ ವಿಶೇಷ ಪೂಜೆ ಗಳು ನಡೆದವು. ಶಿವನಿಗೆ ವಿಶೇಷವಾಗಿ ರುದ್ರಾಭಿಷೇಕ, ಗಂಗಾಜಲಾಭಿಷೇಕ, ಪಂಚಾಮೃತಭಿಷೇಕ, ಎಳನೀರು ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾ ಭಿಷೇಕ ನಡೆದವು. ಶಿವನಿಗೆ ಹಲವೆಡೆ ನಡೆದ ನಾಗಾಭರಣ, ಪೀತಾಂಬರ, ಪುಷ್ಪಾಲಂಕಾರ ಶಿವಶರಣರಿಗೆ ಕಣ್ಮನ ತಣಿಸಿತು. ಮುಜ ರಾಯಿ ಇಲಾಖೆಯಿಂದ ಬಂದ ಗಂಗಾಜಲ ತೀರ್ಥವನ್ನು ಭಕ್ತಾದಿಗಳಿಗೆ ನೀಡಲಾಯಿತು.
ಕಿಕ್ಕೇರಿಯ ಬ್ರಹ್ಮೇಶ್ವರ, ಗದ್ದೆಹೊಸೂರು ಜೋಡಿ ಬಸವೇಶ್ವರ, ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ, ಗೋವಿಂ ದನಹಳ್ಳಿಯ ಪಂಚಲಿಂಗೇಶ್ವರ ಮೂರ್ತಿ ಗಳಾದ ಅಘೋರೇಶ್ವರ, ಈಶಾನ್ಯೇಶ್ವರ, ಸುಜ್ಯೋತ್ನೇಶ್ವರ, ತತ್ಪುರೇಶ್ವರ, ವಾಮಾನೇ ಶ್ವರ, ಮಾದಾಪುರದ ಕೆಂಕೇರಮ್ಮ, ತ್ರಯಂಭ ಕೇಶ್ವರ, ಪಶ್ಚಿಮ ವಾಹಿನಿಯ ರಾಮೇಶ್ವರ, ತೆಂಗಿನಘಟ್ಟದ ಶಿವಾಲಯ, ಲಕ್ಷ್ಮೀಪುರದ ಸಿದ್ಧರಾಮೇಶ್ವರ ಮೊದಲೆಡೆ ಶಿವನ ವಿವಿಧ ಅಲಂಕಾರವನ್ನು ಶಿವಶರಣರು ಕಣ್ತುಂಬಿ ಕೊಂಡರು.
ಗದ್ದೆಹೊಸೂರುವಿನಲ್ಲಿ ಧರ್ಮದರ್ಶಿ ಜಿ.ಟಿ.ಸುಬ್ಬೇಗೌಡರು ನಿರ್ಮಿಸಿರುವ ಜೋಡಿ ಬಸವೇಶ್ವರ ದೇವಾಲಯದಲ್ಲಿ ನಿರ್ಮಿಸಿರುವ ನವಗ್ರಹ ವನಕ್ಕೆ ಗ್ರಾಮಸ್ಥರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ನೂತನ ಕಳಶ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡರು. ಶಿವರಾತ್ರಿಯ ಅಂಗವಾಗಿ ಅಖಂಡ ಭಜನೆ, ಶಿವಸ್ತುತಿ, ಸಹಸ್ರ ನಾಮಾವಳಿ, ಉಪವಾಸ ನಡೆದವು.
ವಿಶೇಷ ಆರಾಧನೆ
ಕೃಷ್ಣರಾಜಪೇಟೆ : ಶಿವರಾತ್ರಿ ಅಂಗವಾಗಿ ತಾಲ್ಲೂಕಿನ ವಿವಿಧ ಶಿವಾಲಯಗಳಲ್ಲಿ ವಿಶೇಷ ಅಲಂಕಾರ, ನೈವೇದ್ಯ, ಅರ್ಚನೆ, ಪೂಜಾ ಕಾರ್ಯ ಹಾಗೂ ಧಾರ್ಮಿಕ ವಿಧಿವಿಧಾನ ಗಳು ಬುಧವಾರ ನಡೆದವು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆದೇವರು ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗೇ ಶ್ವರರ ಗದ್ದುಗೆಯಲ್ಲಿ ವಿಶೇಷ ಆರಾಧನೆಗಳು ನಡೆದವು.
ಶೀಳನೆರೆಯ ಶಿವಾಲಯದಲ್ಲಿ ಶಿವರಾತ್ರಿ ದಿನ ಉದಯಿಸುವ ಸೂರ್ಯನ ಪ್ರಥಮ ಕಿರಣಗಳು ನೇರವಾಗಿ ಶಿವಲಿಂಗದ ತಲೆಯ ಮೇಲೆ ಬೀಳುವ ಅಪೂರ್ವ ದೃಶ್ಯ ವನ್ನು ಆಸ್ತಿಕ ಸಮುದಾಯ ಸಂಭ್ರಮ ದಿಂದ ಕಣ್ತುಂಬಿಕೊಂಡಿತು. ಬಾಳೆಹೊನ್ನೂರಿನ ರಂಬಾಪುರಿ ಪೀಠದ ತೆಂಡೆಕೆರೆ ಶಾಖಾಮಠ ದಲ್ಲಿ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಯವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಅಘಲಯದ ಅಘೋರನಾಥಸ್ವಾಮಿ ದೇವಾಲಯ, ಅಂಬಿಗರಹಳ್ಳಿಯ ಸಂಗಮೇ ಶ್ವರ ದೇವಾಲಯ, ಮೋದೂರಿನ ರಾಮ ಲಿಂಗೇಶ್ವರಸ್ವಾಮಿ, ಮಾಳಗೂರಿನ ಪಂಚ ಲಿಂಗೇಶ್ವರಸ್ವಾಮಿ, ಪಟ್ಟಣದ ಕಲ್ಲೇಶ್ವರ ನಾಥಸ್ವಾಮಿ, ಅಗ್ರಹಾರ ಬಾಚಹಳ್ಳಿಯ ಹುಣಸೇಶ್ವರ ಸ್ವಾಮಿ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರಸ್ವಾಮಿ, ಮಾದಾಪುರದ ಶಿವಾಲಯ, ಕಿಕ್ಕೇರಿಯ ಬ್ರಹ್ಮೇಶ್ವರಸ್ವಾಮಿ, ಸಿಂಧಘಟ್ಟದ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
‘ಕಾಯಕವೇ ಕೈಲಾಸ’
ಕೃಷ್ಣರಾಜಪೇಟೆ: ಮಹಾಶಿವರಾತ್ರಿ ಅಂಗವಾಗಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕ ಮತ್ತು ತಾಲ್ಲೂಕು ಆಡಳಿತಗಳು ಸಂಯುಕ್ತವಾಗಿ ತಾಲ್ಲೂಕಿನ ಹೇಮಗಿರಿಯಲ್ಲಿ ಬುಧವಾರ ವಿಶೇಷ ಶ್ರಮದಾನ ಶಿಬಿರ ಏರ್ಪಡಿಸಿದ್ದವು. ಬೆಟ್ಟದಲ್ಲಿ ಬೆಳೆದಿದ್ದ ಮುಳ್ಳುಗಿಡಗಳನ್ನು ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು.
ಶ್ರಮದಾನದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಎಸ್. ಶಿವರಾಮೇಗೌಡ, ನಾಗಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ಬೆಟ್ಟೇಗೌಡ, ತಾ.ಪಂ ಸದಸ್ಯೆ ಭಾರತಿ ಅಶೋಕ್, ಬಂಡಿಹೊಳೆ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಲಕ್ಷ್ಮೀಪುರ ಮಂಜುನಾಥ್, ರೈತ ಸಂಘದ ಮುಖಂಡ ಎಂ.ವಿ.ರಾಜೇಗೌಡ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್ಕುಮಾರ್, ತಾಲ್ಲೂಕಿನ ಮಾಕ ವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾ ನೆಯ ಅಧಿಕಾರಿ ಕೆ.ಬಾಬುರಾಜ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿ ನಿಧಿಗಳು ಪಾಲ್ಗೊಂಡಿದ್ದರು.
ಶ್ರದ್ಧಾಭಕ್ತಿಯ ಪೂಜೆ
ಮದ್ದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಶಿವ ದೇಗುಲಗಳಲ್ಲಿ ಬುಧವಾರ ಮಹಾಶಿವರಾತ್ರಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ಪಟ್ಟಣದ ಈಶ್ವರಸ್ವಾಮಿ, ನರಸಿಂಹ ಸ್ವಾಮಿ, ರಾಂಪುರ ರಾಮಲಿಂಗೇಶ್ವರ, ವೈದ್ಯನಾಥಪುರ ವೈದ್ಯನಾಥೇಶ್ವರ, ಚಿಕ್ಕಂಕನ ಹಳ್ಳಿ ನಂದಿಬಸವೇಶ್ವರ, ಹನುಮಂತನಗರ ಆತ್ಮಲಿಂಗೇಶ್ವರ, ಚಿಕ್ಕರಸಿನಕೆರೆ ಕಾಲ ಭೈರವೇಶ್ವರ ಸೇರಿದಂತೆ ಹಲವು ದೇಗುಲ ಗಳಲ್ಲಿ ಮುಂಜಾನೆ ಶಿವನಿಗೆ ವಿಶೇಷ ಗಂಗಾ ಜಲ ಅಭಿಷೇಕ, ಕ್ಷೀರಾಭಿಷೇಕ ಹಾಗೂ ಬಿಲ್ವಪತ್ರೆ ಅರ್ಪಣೆ ಕಾರ್ಯ ಸಾಂಗವಾಗಿ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಭಕ್ತರು ದೇಗುಲಗಳಿಗೆ ಭೇಟಿ ನೀಡಿ ತಮ್ಮ ಪೂಜೆ ವಿಶೇಷ ಹರಕೆ, ಅಭಿಷ್ಟೆ ಸಲ್ಲಿಸಿದರು. ಸಂಜೆಯೂ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ಪೂರ್ಣ ಜಾಗರಣೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.