ADVERTISEMENT

ಸಿಬ್ಬಂದಿ ಹೊಂದಾಣಿಕೆ ಕೊರತೆ: ಶಾಸಕ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 6:45 IST
Last Updated 11 ಜೂನ್ 2011, 6:45 IST

ಮಂಡ್ಯ: ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ಇರುವ ಜಾಗರಿ ಪಾರ್ಕ್‌ನಲ್ಲಿನ ಆಡಳಿತ ವೈಫಲ್ಯಕ್ಕೆ ಮೇಲುಸ್ತುವಾರಿ ವಹಿಸಿರುವ ಡಾ. ರಾಜಣ್ಣ ಮತ್ತು ಸಿಬ್ಬಂದಿಗಳ ಹೊಂದಾಣಿಕೆ ಕೊರತೆಯೇ ಕಾರಣವಾಗಿದೆ ಎಂದು ಶಾಸಕ ಅಶ್ವತ್ಥ ನಾರಾಯಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಗರಿಪಾರ್ಕ್ ಅವ್ಯವಸ್ಥೆ ಕುರಿತ ವರದಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಈ ಭಿನ್ನಾಭಿಪ್ರಾಯ ಮತ್ತು ಅವ್ಯವಸ್ಥೆಯನ್ನು ಆದಷ್ಟು ಶೀಘ್ರ ಸರಿಪಡಿಸಬೇಕು.  ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಲಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಪಾಂಡುರಂಗೇಗೌಡ ಅವರಿಗೆ ಸೂಚಿಸಿದರು.

ಜಾಗರಿಪಾರ್ಕ್ ನಿರ್ವಹಣೆಯಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆಯ ಕೊರತೆ ಇದೆ. ಜೊತೆಗೆ ಕೆಲ ಲಾಬಿಗಳು ಕೆಲಸ ಮಾಡುತ್ತಿರಬಹುದು. ಆದರೆ, ಈ ಎಲ್ಲರದ ಒಟ್ಟುಪರಿಣಾಮ ಮಹತ್ವಾಕಾಂಕ್ಷೆಯ ಈ ಯೋಜನೆಯ ಮೇಲೆ ಆಗುತ್ತಿದೆ ಎಂದು ಅಬಿಪ್ರಾಯಪಟ್ಟರು.

ತಾಂತ್ರಿಕತೆ ದೃಷ್ಟಿಯಿಂದ ಆರಂಭಿಕ ಹಂತದಲ್ಲಿ ಸಹಜವಾಗಿ ಕೆಲವೊಂದು ಸಮಸ್ಯೆ ಕಾಣಿಸಬಹುದು. ಆದರೆ, ಆಡಳಿತಾತ್ಮಕವಾಗಿ ಸಮಸ್ಯೆ ಎದುರಾಗಿ ಉದ್ದೇಶ ವಿಫಲವಾದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ ಎಂದು ಹೇಳಿದರು.

ಸಭೆ ಕರೆಯಲು ಚಿಂತನೆ: ನಗರದಲ್ಲಿ ಹೊಳಲು ವೃತ್ತದ ಬಳಿಯ ರೈಲ್ವೆ ಮೇಲು ಸೇತುವೆ, ಫ್ಯಾಕ್ಟರಿ ವೃತ್ತದ ಬಳಿಯ ಒಳಚರಂಡಿ ಅವ್ಯವಸ್ಥೆ ಹಿನ್ನೆಲೆಯಲ್ಲಿ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಕ್ರಮ ನಿರ್ಧರಿಸಲು ಶೀಘ್ರವೇ ಸಭೆ ಕರೆಯಲು ನಗರಸಭೆಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್ ಶುಕ್ರವಾರ ಸ್ಥಳ ಪರಿಶೀಲನೆಯ ಬಳಿಕ ಅವರು ಈ ವಿಷಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.