ADVERTISEMENT

ಸುಸಂಸ್ಕೃತರು ಇಲ್ಲದ ರಾಜಕೀಯ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:59 IST
Last Updated 21 ಡಿಸೆಂಬರ್ 2012, 6:59 IST

ಮಂಡ್ಯ: ವಿಚಾರವಂತರು, ಸುಸಂಸ್ಕೃತರು, ತತ್ವನಿಷ್ಠ ರಾಜಕಾರಣಿಗಳು ಇಂದಿನ ರಾಜಕೀಯಕ್ಕೆ ಸಲ್ಲುವುದಿಲ್ಲ. ರಾಜಕಾರಣದಲ್ಲಿ ಉಳಿಯುವುದಕ್ಕೆ, ಪ್ರಸಿದ್ಧಿಗೆ ಬರುವುದಕ್ಕೆ ಇವತ್ತಿನ ಮಾನದಂಡಗಳೇ ಬೇರೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಬಿ.ಎಲ್.ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಮಂಡ್ಯ ಜ್ಲ್ಲಿಲೆ ಹಾಗೂ ಮದ್ದೂರು ತಾಲ್ಲೂಕು ಘಟಕ ಸಹಭಾಗಿತ್ವದಲ್ಲಿ ಗುರುವಾರ ನಗರದ ರೈತ ಸಭಾಂಗಣದಲ್ಲಿ ನಡೆದ `ತಾಯಮ್ಮ ಎಸ್.ಸಿ.ಮಲ್ಲಯ್ಯ' ರಾಜ್ಯ ಮಟ್ಟದ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣ ಮಾಡುವವರಿಗಿಂತ, ಜನಪರ ಕೆಲಸ ಮಾಡುವ ವ್ಯಕ್ತಿಗಳೇ ಬಹುಕಾಲದವರೆಗೆ ಜನಮಾನಸದಲ್ಲಿ ಉಳಿಯುತ್ತಾರೆ. ಗಾಂಧೀಜಿ, ವಿನೋಬಾ ಭಾವೆ, ಜಯಪ್ರಕಾಶ್ ನಾರಾಯಣ ಅವರಂಥ ಮಹನೀಯರು ಜನರ ಮನಸ್ಸಿನಲ್ಲಿ ಇನ್ನೂ ಉಳಿದಿದ್ದಾರೆ ಎಂದರೆ ಅವರ ಜನಪರ ಮತ್ತು ಸಮಾಜಮುಖಿ ಕೆಲಸಗಳೇ ಕಾರಣ ಎಂದು ಪ್ರತಿಪಾದಿಸಿದರು.

ಕೆರೆಗಳ ಪುನಶ್ಚೇತನ, ರಸ್ತೆಗಳ ಅಭಿವೃದ್ಧಿ ಮೊದಲಾದ ಜನಪರ ಕಾರ್ಯಗಳಿಂದಾಗಿ ಎಸ್.ಸಿ.ಮಲ್ಲಯ್ಯ ಅವರನ್ನು ನೆನಪಿಸಿಕೊಳ್ಳಬೇಕಿದೆ. ಅವರು ಸದಾ ಜನರ ಹಿತವನ್ನೇ ಬಯಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯ ಅರಿತು ಅದನ್ನು ಮತ್ತಷ್ಟು ಪರಿಪಕ್ವಗೊಳಿಸುವ ದಿಕ್ಕಿನಲ್ಲಿ  ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು.

ನಾಡೋಜ ದೇ.ಜವರೇಗೌಡ ಮಾತನಾಡಿ, ದಾರ್ಶನಿಕರು, ಮಹಾಕವಿಗಳು ಹಾಗೂ ತತ್ವನಿಷ್ಠ ರಾಜಕಾರಣಿಗಳ ಜೀವನಚರಿತ್ರೆ ಓದಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಎಸ್.ಸಿ.ಮಲ್ಲಯ್ಯ ಅವರು ರೈತರ ಬಗೆಗೆ ಅಪಾರ ಕಾಳಜಿ ಹೊಂದಿದ್ದರು. ಮದ್ದೂರು ತಾಲ್ಲೂಕಿಗೆ ಪ್ರಥಮವಾಗಿ ನೀರು ತಂದ ಕೀರ್ತಿ ಮಲ್ಲಯ್ಯನವರಿಗೆ ಸಲ್ಲುತ್ತದೆ ಎಂದರು.

ಜಾನಪದ ಕ್ಷೇತ್ರದಲ್ಲಿಯ ಸಾಧನೆಗಾಗಿ ಮಾತೆಂಗವ್ವ ಮಾದಾರ, ಐರೋಡಿ ಗೋವಿಂದಪ್ಪ, ಮಾತಾ ಮಂಜವ್ವ ಜೋಗತಿ, ಶಿವಮ್ಮ ಹಾಗೂ ರಾಮಲಿಂಗೇಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ `ತಾಯಮ್ಮ ಎಸ್.ಸಿ.ಮಲ್ಲಯ್ಯ' ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರಿಗೆ ತಲಾ 3 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಡಾ.ಟಿ.ಸಿ.ಪೂರ್ಣಿಮಾ ಅವರ `ಕಾವೇರಿ ಮಡಿಲ ಕನಸುಗಾರ ಎಸ್.ಸಿ.ಮಲ್ಲಯ್ಯ' ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಮಾಜಿ ಶಾಸಕ ಎಸ್.ಎಂ.ಶಂಕರ್, ಕಸಾಪ ಮಂಡ್ಯ ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಬೆಂಗಳೂರು ನಗರ ಘಟಕ ಅಧ್ಯಕ್ಷ ಟಿ.ತಿಮ್ಮೇಶ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ.ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT