ADVERTISEMENT

`ಸೂಕ್ಷ್ಮ ವಿಮಾ ಪ್ರತಿನಿಧಿತ್ವ ಸಂಸ್ಥೆಗಳಿಂದ ಹಣ ದುರ್ಬಳಕೆ'

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 5:45 IST
Last Updated 20 ಜುಲೈ 2013, 5:45 IST

ಶ್ರೀರಂಗಪಟ್ಟಣ: ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ಕ್ಕಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸುತ್ತಿದ್ದ ಕೆಲವು ಸೂಕ್ಷ್ಮ ವಿಮಾ ಪ್ರತಿನಿಧಿತ್ವ ಸಂಸ್ಥೆಗಳು ಪಾಲಿಸಿದಾರರ ಹಣವನ್ನು ದುರ್ಬಳಕೆ ಮಾಡಿ ಕೊಂಡಿದ್ದು, ನಮ್ಮ ಸಂಸ್ಥೆಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ ಎಂದು ಮಂಡ್ಯದ ವಿಕಸನ ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ನಿರ್ದೇಶಕ ಮಹೇಶ್ಚಂದ್ರಗುರು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಭಾರತೀಯ ಜೀವವಿಮಾ ಶಾಖೆಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ಹಿರಿಯ ಶಾಖಾಧಿಕಾರಿ ಚರ್ಚೆ ನಡೆಸಿದರು. ನಮ್ಮ ಸಂಸ್ಥೆ ಸೂಕ್ಷ್ಮ ವಿಮಾ ಪ್ರತಿನಿಧಿತ್ವವನ್ನು ಸಮರ್ಪಕವಾಗಿ ನಿಭಾಯಿಸಿದೆ. ಸಮನ್ವಯ ವಿದ್ಯಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಭೂಮಿಕಾ ವಿದ್ಯಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬಾಳಿಗೊಂದು ಗುರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಪ್ರಗತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳು ಸೂಕ್ಷ್ಮ ವಿಮೆಯ ಪ್ರೀಮಿಯಂ ಹಣವನ್ನು ಸಂಗ್ರಹಿಸುವು ದರಲ್ಲಿ ಮತ್ತು ಅದನ್ನು ಎಲ್‌ಐಸಿಗೆ ಸಂದಾಯ ಮಾಡುವುದರಲ್ಲಿ ಲೋಪ ಎಸಗಿವೆ. ಈ ಬಗ್ಗೆ ಎಲ್‌ಐಸಿ ಪ್ರಕಟಣೆಯನ್ನೇ ಹೊರಡಿಸಿದೆ.
ವಿಕಸನ ಸಂಸ್ಥೆ ಯಾವುದೇ ಲೋಪ ಎಸಗಿಲ್ಲದೇ ಇದ್ದರೂ ಜುಲೈ 18ರಂದು ಪಟ್ಟಣದಲ್ಲಿ ಸೂಕ್ಷ್ಮ ವಿಮಾ ಏಜೆಂಟರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಮ್ಮ ಸಂಸ್ಥೆಯ ಹೆಸರನ್ನು ಉಲ್ಲೇಖಿಸಿ ಸಂಸ್ಥೆಯ ಘನತೆಗೆ ಕುಂದುಂಟು ಮಾಡಲಾಗಿದೆ. ಮಾಧ್ಯಮಗಳಿಗೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಸಿದ ಎಲ್‌ಐಸಿ ಹಿರಿಯ ಶಾಖಾಧಿಕಾರಿ ವಿ. ರಮೇಶ್‌ಬಾಬು, ಎಲ್‌ಐಸಿ ಸೂಕ್ಷ್ಮ ವಿಮಾ ಪಾಲಿಸಿಗೂ ನಮ್ಮ ಶಾಖೆಗೂ ಸಂಬಂಧ ಇಲ್ಲ. ಈ ವಿಷಯದಲ್ಲಿ ವಿಕಸನ ಅಥವಾ ಇನ್ನಾವುದೇ ಸಂಸ್ಥೆ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಿಲ್ಲ. ಹಾಸನ ಜಿಲ್ಲೆಯಲ್ಲಿ ನಡೆದಿರುವ ಸೂಕ್ಷ್ಮ ವಿಮಾ ಪಾಲಿಸಿ ಸಂಗ್ರಹದಲ್ಲಿ ಆಗಿರುವ ಲೋಪ ಕುರಿತು ಅಲ್ಲಿನ ಎಸ್ಪಿ ಸಿಓಡಿ ತನಿಖೆಗೆ ವಹಿಸಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.