ಪಾಂಡವಪುರ: ತಾಲ್ಲೂಕು ಕೃಷಿ ಇಲಾಖೆಯು ಮಾಜಿ ಪ್ರಧಾನಿ ಚರಣ್ ಸಿಂಗ್ ನೆನಪಿನಲ್ಲಿ ಸೋಮವಾರ ‘ರೈತ ದಿನಾಚರಣೆ’ಯನ್ನು ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿತು.
ಪಟ್ಟಣದ ಟಿಎಪಿಸಿಎಂಸ್ ರೈತ ಸಭಾಂಗಣದಲ್ಲಿ ನಡೆದ ‘ರೈತ ದಿನಾಚರಣೆ’ಯನ್ನು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಉದ್ಫಾಟಿಸಿ ಮಾತನಾಡಿದರು.
ರೈತರ ಬಗ್ಗೆ ಸಂಸತ್ನಲ್ಲಿ ಮೊದಲ ಬಾರಿಗೆ ದನಿಯೆತ್ತಿದ ಏಕೈಕ ಧೀಮಂತ ರಾಜಕಾರಣಿ ಚರಣಸಿಂಗ್. ಅವರ ಮಾತನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ. ಇಂದಿನ ದಿನಗಳಲ್ಲಿ ಯಾವ ಸಂಸದರೂ ಸಂಸತ್ನಲ್ಲಿ ರೈತರ ಬಗ್ಗೆ ದನಿಯೆತ್ತುತ್ತಿಲ್ಲ.
ದೇಶದಾದ್ಯಂತ ಸುಮಾರು 7 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ರೈತರ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ ಎಂದರು.
ರೈತರಿಗೆ ಸನ್ಮಾನ: ಅತಿ ಹೆಚ್ಚು ಇಳುವರಿ ಗಳಿಸಿ ಜಿಲ್ಲಾ ಮಟ್ಟದ ಭತ್ತದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಪಾಂಡವಪುರ ಪಟ್ಟಣದ ರೈತ ಶಿವಯ್ಯ , ತಾಲ್ಲೂಕು ಮಟ್ಟದಲ್ಲಿ ರಾಗಿ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ರಾಗಿಮುದ್ದನಹಳ್ಳಿ ಎಂ.ಕೆ. ತಿಮ್ಮೇಗೌಡ, ದ್ವಿತೀಯ ಬಹುಮಾನ ಪಡೆದ ಅಮೃತಿ ಗ್ರಾಮದ ಸಿದ್ದಶೆಟ್ಟಿ ಅವರಿಗೆ ಧನರೂಪದ ಚೆಕ್ ವಿತರಿಸಿ ಸನ್ಮಾನಿಸಲಾಯಿತು.
ಕೃಷಿ ಯಂತ್ರಗಳಾದ ಭತ್ತದ ಕಟಾವು ಪವರ್ ರೀಪರ್, ಪವರ್ ಟಿಲ್ಲರ್, ರೋಟೋನೇಟರ್, ಕಲ್ಟಿವೇಟರ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತಲ್ಲದೆ, ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ವಿ.ಸಿ. ಫಾರಂನ ವಿಜ್ಞಾನಿಗಳಾದ ಡಾ.ಕೇಶವ್, ಡಾ.ದೀಪಕ್, ಡಾ.ಪಟೇಲ್, ಡಾ.ಚೇತನ್ ಅವರುಗಳು ಬೇಸಾಯಶಾಸ್ತ್ರ, ಕೀಟಶಾಸ್ತ್ರಗಳ ಬಗ್ಗೆ ರೈತರಿಗೆ ತರಬೇತಿ ಹಾಗೂ ಮಾಹಿತಿ ನೀಡಿ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು.
ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಕಲಾವಿದ ಚಂದ್ರು ತಂಡದಿಂದ ನಡೆದ ಡೊಳ್ಳು ಕುಣಿತ ಜನರನ್ನು ಬೆರಗುಗೊಳಿಸಿತು. ಮಂಡ್ಯದ ಚಿಂತನ ಸಾಂಸ್ಕೃತಿಕ ಕಲಾತಂಡದಿಂದ ‘ರೈತ ಗೀತೆ’ ಹಾಗೂ ‘ಭೂಚೇತನ’ ನಾಟಕ ಕೃಷಿಯ ಬಗ್ಗೆ ಬೆಳಕು ಚೆಲ್ಲಿದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಕೆಂಪೂಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ. ಶ್ರೀನಿವಾಸ್, ಉಪಾಧ್ಯಕ್ಷ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ಕೃಷ್ಣೇಗೌಡ, ಎಪಿಎಂಸಿ ಅಧ್ಯಕ್ಷ ಎಂ.ಕೆ. ಕೆಂಪುಕೃಷ್ಣ, ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ವಿಶ್ವನಾಥ್, ಉಪಾಧ್ಯಕ್ಷ ಡಿ.ಜಿ. ದೇವೇಗೌಡ, ಟಿಎಪಿಸಿಎಂಸ್ ಅಧ್ಯಕ್ಷ ಕೆ. ಪುಟ್ಟೇಗೌಡ, ಮಂಡ್ಯ ಸಹಾಯಕ ಕೃಷಿ ನಿರ್ದೆಶಕ, ಪಾಂಡವಪುರ ಸಹಾಯಕ ಕೃಷಿ ನಿರ್ದೇಶಕ ಜಿ.ಎಂ. ಮಹಾದೇವಯ್ಯ, ತಾಂತ್ರಿಕ ನಿರ್ದೇಶಕ ರಾಜೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.