ADVERTISEMENT

3ಕ್ಕೆ ಕುಮಾರ ಪರ್ವ: ಜೆಡಿಎಸ್‌ ಪ್ರಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 6:29 IST
Last Updated 28 ಫೆಬ್ರುವರಿ 2018, 6:29 IST

ಶ್ರೀರಂಗಪಟ್ಟಣ: ಮಾರ್ಚ್‌ 3ರಂದು ಪಟ್ಟಣದಲ್ಲಿ ನಡೆಯಲಿರುವ ‘ಕುಮಾರ ಪರ್ವ’, ರವೀಂದ್ರ ಶ್ರೀಕಂಠಯ್ಯ ಮತ್ತು ಬೆಂಬಲಿಗರ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದ ನಿಮಿತ್ತ ಪ್ರಚಾರ ಕಾರ್ಯ ಮಂಗಳವಾರ ಆರಂಭವಾಯಿತು.

ಇಲ್ಲಿನ ರಾಂಪಾಲ್‌ ರಸ್ತೆ ಬಳಿಯ ಐತಿಹಾಸಿಕ ಬಿದ್ದುಕೋಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಜೆಡಿಎಸ್‌ ಕ್ಷೇತ್ರ ಘಟಕದ ಅಧ್ಯಕ್ಷ ಪಾಲಹಳ್ಳಿ ಮುಕುಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

‘ಸಮಾವೇಶ ಕುರಿತು ಜನರಿಗೆ ಮಾಹಿತಿ ನೀಡಲು ಎಲ್ಲ ಗ್ರಾಮಗಳಲ್ಲೂ ಪ್ರಚಾರ ನಡೆಯಲಿದೆ. ಪ್ರತಿ ಹೋಬಳಿಗಳಲ್ಲಿ ಎರಡು ಆಟೊಗಳು 5 ದಿನಗಳ ಕಾಲ ನಿರಂತರವಾಗಿ ಪ್ರಚಾರ ಮಾಡಲಿವೆ. ಜೆಡಿಎಸ್‌ ಕಾರ್ಯಕರ್ತರು ಮನೆ–ಮನೆಗೆ ಕರಪತ್ರ ಹಂಚಲಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಶಿವಸ್ವಾಮಿ ಮಾತನಾಡಿ, ‘ಸಮಾವೇಶಕ್ಕೆ ಬರುವ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ ಮೊದಲಾದ ಗಣ್ಯರನ್ನು ಕುವೆಂಪು ವೃತ್ತದಿಂದ ಸಮಾವೇಶ ನಡೆಯುವ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ’ ಎಂದರು.

ಪುರಸಭೆ ಮಾಜಿ ಸದಸ್ಯ ಸಾಯಿಕುಮಾರ್‌, ‘ಕ್ಷೇತ್ರದ 6 ಹೋಬಳಿಗಳಿಂದಲೂ ಸಮಾವೇಶಕ್ಕೆ ಜನರು ಬರಲಿದ್ದು, 25 ಸಾವಿರ ಜನರು ಕೂರಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಬಿದ್ದರೆ ಇನ್ನೂ 5 ಸಾವಿರ ಆಸನಗಳನ್ನು ಹಾಕಲಾಗುತ್ತದೆ’ ಎಂದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಜೆಡಿಎಸ್‌ ರೈತದಳ ಅಧ್ಯಕ್ಷ ಡಿ.ಎಂ.ರವಿ, ನಗರ ಘಟಕದ ಅಧ್ಯಕ್ಷ ಎಂ.ಸುರೇಶ್‌, ಪುರಸಭೆ ಸದಸ್ಯರಾದ ಎಸ್‌. ಪ್ರಕಾಶ್‌, ನಂದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.