ಶ್ರೀರಂಗಪಟ್ಟಣ: ಇಲ್ಲಿನ ಉತ್ತರ ಕಾವೇರಿ ಸೇತುವೆ ಬಳಿ ಬೈಕ್ ವೊಂದು ಮಂಗಳವಾರ ಸಂಜೆ ಕಾವೇರಿ ನದಿಗೆ ಬಿದ್ದಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ.
ಪಾಂಡವಪುರ ತಾಲ್ಲೂಕಿನ ಬ್ಯಾಟೆತಿಮ್ಮನಕೊಪ್ಪಲು ಗ್ರಾಮದ ಶ್ರೀನಿವಾಸ್ ಅವರ ಮಗ ರಮೇಶ್ ಅವರು ಪಟ್ಟಣದಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ಸೇತುವೆ ಮೇಲಿನಿಂದ ಬೈಕ್ ಸಹಿತ ನದಿಗೆ ಬಿದ್ದಿದ್ದಾರೆ. ಪೊಲೀಸರು ರಮೇಶ್ ಮತ್ತು ಬೈಕ್ ಅನ್ನು ಮೇಲೆ ಎತ್ತಿದ್ದಾರೆ. ರಮೇಶ್ ಸಮಾರು 40 ಅಡಿ ಆಳದ ನದಿಗೆ ಬಿದ್ದಿದ್ದು, ಗಡ್ಡದ ಭಾಗದಲ್ಲಿ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ– ರಾಂಪುರ ಸಂಪರ್ಕಿಸುವ ಕಾವೇರಿ ನದಿ ಸೇತುವೆ ಹತ್ತಾರು ಹಳ್ಳಿಗಳಿಗೆ ಪ್ರಮುಖ ಸಂಪರ್ಕ ಕೊಂಡಿ ಯಾಗಿದೆ. ಈ ಸೇತುವೆ ತೀರಾ ಕಿರಿದಾಗಿದೆ. ತಡೆಗೋಡೆಯೂ ಇಲ್ಲ. ಹಾಗಾಗಿ ವಾಹನ ಹಾಗೂ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಸೇತುವೆಗೆ ತಡೆಗೋಡೆ ನಿರ್ಮಿಸ ಬೇಕು ಎಂದು ರಾಂಪುರ, ದೊಡ್ಡೇಗೌಡನಕೊಪ್ಪಲು, ಎಣ್ಣೆ ಹೊಳೆಕೊಪ್ಪಲು, ಬ್ಯಾಟೆ ತಿಮ್ಮನ ಕೊಪ್ಪಲು, ಅಚ್ಚಪ್ಪನ ಕೊಪ್ಪಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.