ADVERTISEMENT

ಮಂಡ್ಯ: ಲೋಕ್ ಅದಾಲತ್‍; 21,504 ಪ್ರಕರಣ ಇತ್ಯರ್ಥ

ನೀರಿನ ಬಿಲ್‌ ಪಾವತಿಸದ 11 ಸಾವಿರ ಜನ, ಸಮಸ್ಯೆ ಇತ್ಯರ್ಥಕ್ಕೆ ಇಲಾಖೆಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:43 IST
Last Updated 19 ಆಗಸ್ಟ್ 2021, 13:43 IST
ಎಸ್‌.ಬಿ.ವಸ್ತ್ರಮಠ
ಎಸ್‌.ಬಿ.ವಸ್ತ್ರಮಠ   

ಮಂಡ್ಯ: ‘ಆ.14ರಂದು ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್‌ನಲ್ಲಿ 21,504 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ಕಕ್ಷಿದಾರರ ಹಣ, ಸಮಯ ಉಳಿತಾಯ ಮಾಡಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ ವಸ್ತ್ರಮಠ ಹೇಳಿದರು.

‘ಒಟ್ಟು 30,904 ಪ್ರಕರಣಗಳನ್ನು ಇತ್ಯರ್ಥಕ್ಕೆ ತೆಗೆದುಕೊಳ್ಳಲಾಗಿತ್ತು, ಅವುಗಳಲ್ಲಿ 21,504 ಕೇಸುಗಳನ್ನು ಬಗೆಹರಿಸಲಾಗಿದೆ. ಇದರಲ್ಲಿ ಒಟ್ಟು ₹ 46,22 ಕೋಟಿ ಮೌಲ್ಯದ ಪ್ರಕರಣದ ಬಗೆಹರಿದಿದೆ. ಜಿಲ್ಲೆಯ ಎಲ್ಲ ತಾಲ್ಲೂಕುವಾರು ಕೋರ್ಟ್‍ಗಳಲ್ಲಿ ಇದೂವರೆಗೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 472 ಸಿವಿಲ್ ಪ್ರಕರಣಗಳು, 20,030 ಕ್ರಿಮಿನಲ್ ಪ್ರಕರಣ ಹಾಗೂ ಇತರೆ 982 ಪ್ರಕರಣಗಳನ್ನು ಬಗೆಹರಿಸಲಾಗಿದೆ.’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಂಡ್ಯ ತಾಲ್ಲೂಕಿನ 11,963, ಮದ್ದೂರ ತಾಲ್ಲೂಕಿನ 3,014, ಮಳವಳ್ಳಿಯ 2,020, ಶ್ರೀರಂಗಪಟ್ಟಣದ 2,047, ಕೆ.ಆರ್ ಪೇಟೆಯ 2,565, ನಾಗಮಂಗಲದ 1,242 ಹಾಗೂ ಪಾಂಡವಪುರ ತಾಲ್ಲೂಕಿನ 759 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಿಶೇಷ ಭೂಸ್ವಾಧೀನ ಪ್ರಕರಣಗಳು, ನೀರಿನ ಬಿಲ್, ಬ್ಯಾಂಕ್ ಸಾಲ ಮರುಪಾವತಿ, ಬಿಎಸ್ಎನ್ಎಲ್ ಬಿಲ್ ಪಾವತಿ, ಚೆಕ್‌ ಅಮಾನ್ಯ ಮುಂತಾದ ಪ್ರಕರಣಗಳನ್ನು ತೀರ್ಮಾನ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಆ ಮೂಲಕ ಬಾಕಿ ಉಳಿದಿದ್ದ ಪ್ರಕರಣಗಳನ್ನು ಬಗೆಹರಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 11,000 ಜನರು ನೀರಿನ ಬಿಲ್ ಪಾವತಿಸಿಲ್ಲ. ಒಂದು ದಿನದಲ್ಲಿ 1 ಸಾವಿರ ಜನರಿಗೆ ನೋಟಿಸ್ ನೀಡುವ ಮೂಲಕ 11 ದಿನದಲ್ಲಿ 11 ಸಾವಿರ ಜನರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಬಿಲ್ ಪಾವತಿಸುವಂತೆಯೂ ತಿಳವಳಿಕೆ ನೀಡಲಾಗಿದೆ. ನೀರಿನ ವ್ಯಾಜ್ಯ ಸಂಬಂಧ ಬಂದ ದೂರುಗಳನ್ನು ಕೂಡಲೇ ಬಗೆಹರಿಸುವಂತೆಯೂ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಲಾಗಿದೆ’ ಎಂದರು.

‘ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳು ಕುಡಿಯುವ ನೀರಿನ ಬಾಕಿ ಬಿಲ್‌ ಪಾವತಿಗೆ ಸಂಬಂಧಿಸಂದೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಬಿಲ್‌ ಬಾಕಿ ಉಳಿಸಿಕೊಳ್ಳದಂತೆ ಗ್ರಾಹಕರಿಗೂ ತಿಳಿಸಲಾಗಿದೆ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಎ.ಎಂ.ನಳಿನಾಕುಮಾರಿ ಇದ್ದರು.

**

ತಾಲ್ಲೂಕುವಾರು ಪ್ರಕರಣಗಳ ವಿವರ

ತಾಲ್ಲೂಕು ಒಟ್ಟು ಪ್ರಕರಣ ಇತ್ಯರ್ಥ
ಮಂಡ್ಯ 13,133 9,879
ಮದ್ದೂರು 4,362 3,014
ಮಳವಳ್ಳಿ 2,680 2,020
ಶ್ರೀರಂಗಪಟ್ಟಣ 3,156 2,047
ಕೆ.ಆರ್‌.ಪೇಟೆ 3,640 2,565
ನಾಗಮಂಗಲ 2,569 1,242
ಪಾಂಡವಪುರ 1,407 737
ಒಟ್ಟು 30,947 21,504

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.