
ಕಿಕ್ಕೇರಿ ಹೋಬಳಿಯ ಆನೆಗೂಳ ಗ್ರಾಮದಲ್ಲಿರುವ ಶಿಥಿಲಾವಸ್ಥೆಯ ಬಸ್ನಿಲ್ದಾಣ
ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೂಳ ಗ್ರಾಮದಲ್ಲಿರುವ ಬಸ್ನಿಲ್ದಾಣ ಜೀರ್ಣಾವಸ್ಥೆಯಲ್ಲಿದ್ದು, ದಾರಿಹೋಕರ, ಪ್ರಯಾಣಿಕರ ಮೇಲೆ ಬೀಳುವಂತಿದೆ.
ಚಾವಣಿಯ ಕಬ್ಬಿಣದ ಸರಳು ಕಿತ್ತು ಬಂದು ಗಾರೆ ಚುರುಕಿ ಉದುರುತ್ತಿದೆ. ಚುರುಕಿಯಲ್ಲಿನ ಕಬ್ಬಿಣದ ಸರಳು ತುಕ್ಕು ಹಿಡಿದು ಹೊರಚಾಚಿವೆ. ಕೂರುವ ಆಸನಗಳು ಕಿತ್ತುಬಂದಿದ್ದು ಕೂರಲು ಸಾಧ್ಯವಾಗದಷ್ಟು ಹೊಲಸಾಗಿವೆ. ಗಾಳಿ, ಮಳೆ ಬಂದರೆ ನಿಲ್ದಾಣದಲ್ಲಿ ನಿಲ್ಲಲು ಕೂಡ ಆಗದಂತಹ ಸ್ಥಿತಿ ಇದೆ. ನಿರ್ವಹಣೆ ಕಾಣದ ನಿಲ್ದಾಣದ ತುಂಬಾ ಕಸ, ಕಡ್ಡಿ, ಬೀಡಿ, ಸಿಗರೇಟು, ಪ್ಲಾಸ್ಟಿಕ್ ಕವರ್ನಂತಹ ಹಲವು ಅನುಪಯುಕ್ತ ವಸ್ತುಗಳು ರಾಶಿ ಬಿದ್ದಿವೆ. ತ್ಯಾಜ್ಯ ಕೊಳೆತು ಅಸಹ್ಯಕರ ವಾಸನೆಯಿಂದ ಮೂಗು ಮುಚ್ಚಿಕೊಂಡು ನಿಲ್ದಾಣದ ಬಳಿ ನಿಲ್ಲಬೇಕಿದೆ.
ರಾಜ್ಯ ಹೆದ್ದಾರಿಯಲ್ಲಿರುವ ಗ್ರಾಮದ ಎರಡು ಬದಿಯಲ್ಲಿ ಬಸ್ ನಿಲ್ದಾಣಗಳಿವೆ. ಚನ್ನರಾಯಪಟ್ಟಣ ಮಾರ್ಗದಲ್ಲಿನ ಬಸ್ ತಂಗುದಾಣ ಸುಸ್ಥಿತಿಯಲ್ಲಿದೆ. ತರಕಾರಿ ಮತ್ತಿತರ ಅಂಗಡಿಗಳು ಜಾಗವನ್ನು ಆಕ್ರಮಿಸಿಕೊಳ್ಳುವುದರಿಂದ ಪ್ರಯಾಣಿಕರು ಕೂರಲು ತೊಂದರೆ ಕಾಡುತ್ತಿದೆ. ಕೆ.ಆರ್.ಪೇಟೆ ಮಾರ್ಗದ ಕಡೆ ಇರುವ ತಂಗುದಾಣ ಅಪಾಯಕರವಾಗಿ ಬೀಳುವ ಸ್ಥಿತಿಯಲ್ಲಿದ್ದು, ಶಿಥಿಲಾವಸ್ಥೆಯಲ್ಲಿರುವ ಬಸ್ ತಂಗುದಾಣ ತ್ವರಿತವಾಗಿ ದುರಸ್ತಿಯಾಗಬೇಕಿದೆ ಎನ್ನುತ್ತಾರೆ ಸಮಾಜ ಸೇವಾಕರ್ತ ಗುರುಮೂರ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.