ADVERTISEMENT

ಹುಲಿ ಗೊಂಬೆಗಳು ಸೃಷ್ಟಿಸಿದ ಅವಾಂತರ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 3:31 IST
Last Updated 17 ಜೂನ್ 2021, 3:31 IST
ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಯ ಮೇಲ್ಪದರ
ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಯ ಮೇಲ್ಪದರ   

ಪಾಂಡವಪುರ (ಮಂಡ್ಯ): ತಾಲ್ಲೂಕಿನ ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಗಳ ಮೇಲ್ಪದರ ಬುಧವಾರ ಕೆಲಕಾಲ ಆತಂಕ ಸೃಷ್ಟಿಸಿತ್ತು. ನಿಜವಾದ ಹುಲಿಯೇ ಸತ್ತು ಕೆರೆಯಲ್ಲಿ ತೇಲುತ್ತಿರುವುದಾಗಿ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿಬಿಟ್ಟಿರುವುದು ಅವಾಂತರಕ್ಕೆ ಕಾರಣವಾಯಿತು.

ಗ್ರಾಮಗಳಲ್ಲಿ ನಡೆಯುವ ಮಹದೇಶ್ವರಸ್ವಾಮಿ ಜಾತ್ರೆ, ಹುಲಿವಾಹನೋತ್ಸವ ಸಂದರ್ಭದಲ್ಲಿ ಬಳಸುವ ಹುಲಿವೇಷದ ಪರಿಕರ, ಹುಲಿ ಗೊಂಬೆಗಳನ್ನು ಬಹಳ ದಿನಗಳ ಹಿಂದೆಯೇ ತೊಣ್ಣೂರು ಕೆರೆಗೆ ಬಿಡಲಾಗಿತ್ತು. ಮಳೆಯಾಗಿ ಕೆರೆಗೆ ಹೊಸ ನೀರು ಹರಿದು ಬಂದಿದ್ದರಿಂದ, ಹುಲಿ ಚರ್ಮದಂತಿರುವ ಗೊಂಬೆಯ ಮೇಲ್ಪದರವು ಮೇಲೆ ಬಂದು ತೇಲುತ್ತಿತ್ತು.

ಕೆಲವರು ಇವುಗಳ ಛಾಯಾಚಿತ್ರ ತೆಗೆದು, ವಿಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಹುಲಿ ಕೊಂದು ಕೆರೆಗೆ ಎಸೆದಿದ್ದಾಗಿಯೂ ಚರ್ಚೆಗಳು ನಡೆದವು. ಈ ವಿಚಾರ ಅರಣ್ಯ ಇಲಾಖೆಗೂ ತಲುಪಿತು.

ADVERTISEMENT

ಈ ಬಗ್ಗೆ ಸ್ಪಷ್ಟನೆ ನೀಡಿದ ಆರ್‌ಎಫ್‌ಒ ಪುಟ್ಟಸ್ವಾಮಿ, ‘ಇವು ಮರ, ಪ್ಲಾಸ್ಟಿಕ್‌ನಿಂದ ಮಾಡಿದ ಹುಲಿಯ ಗೊಂಬೆಗಳು, ನಿಜವಾದ ಹುಲಿ ಅಲ್ಲ. ಸುಳ್ಳು ಸುದ್ದಿ ಹರಡಿಸಿ ಆತಂಕ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.