ಹಲಗೂರು (ಮಂಡ್ಯ ಜಿಲ್ಲೆ): ವಿವಿಧ ಕೊಲೆ ಪ್ರಕರಣಗಳ ಆರೋಪಿ ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಬಾಳೆ ಹೊನ್ನಿಗ ಗ್ರಾಮದ ಮುತ್ತುರಾಜು ಅಲಿಯಾಸ್ ಡಕ್ಕ ಎಂಬಾತನ ಮೇಲೆ ಪೊಲೀಸರು ಭಾನುವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
‘ಹಲಗೂರು, ಕಿರುಗಾವಲು, ಹಾರೋಹಳ್ಳಿ ಮತ್ತು ಮಂಡ್ಯ ಪೂರ್ವ ಠಾಣೆಗಳಲ್ಲಿರುವ 11 ಕೊಲೆ ಪ್ರಕರಣಗಳು ಮತ್ತು ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಹಲವು ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
ಆತ, ಮಂಡ್ಯದಿಂದ ಮಳವಳ್ಳಿ ಕಡೆಗೆ ಬೈಕ್ನಲ್ಲಿ ಬರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಚಿಕ್ಕಮುಲಗೂಡು ಮತ್ತು ಹನಿಯಂಬಾಡಿ ಮಾರ್ಗ ಮಧ್ಯೆ ಅಡ್ಡಗಟ್ಟಿದ್ದಾರೆ. ಆರೋಪಿ ಮುಖ್ಯ ರಸ್ತೆಯಿಂದ ಜಮೀನುಗಳಿಗೆ ಸಂಪರ್ಕಿಸುವ ಕಚ್ಚಾ ರಸ್ತೆಯಲ್ಲಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬೆನ್ನತ್ತಿದ ಪೊಲೀಸರು ಸುತ್ತುವರಿದಾಗ ಕಾನ್ಸ್ಟೆಬಲ್ ಸಿದ್ದರಾಜು ಅವರಿಗೆ ಮಾರಕಾಸ್ತ್ರಗಳಿಂದ ಬಲಗೈಗೆ ಗಾಯಪಡಿಸಿದ್ದಾನೆ. ಆಗ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆಗಲೂ ಪರಾರಿಯಾಗಲು ಯತ್ನಿಸಿದ ಮುತ್ತುರಾಜ್ ಮೇಲೆ ಸಿಪಿಐ ಬಿ.ಎಸ್.ಶ್ರೀಧರ್ ಗುಂಡಿನ ದಾಳಿ ನಡೆಸಿದ್ದಾರೆ. ಬಲಗಾಲಿನ ಮಂಡಿಗೆ ಗುಂಡು ಹೊಕ್ಕಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಗಾಯಗೊಂಡ ಸಿದ್ದರಾಜು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.