ನಾಗಮಂಗಲ: ಎರಡನೇ ಪತ್ನಿಯ ಮಗನೊಂದಿಗೆ ಸೇರಿ ಮೊದಲ ಪತ್ನಿಯ ಮಗನ ಕೊಲೆಗೆ ತಂದೆ ಯತ್ನಿಸಿದ ಘಟನೆ ನಡೆದಿದೆ.
ತಾಲ್ಲೂಕಿನ ಬೆಳ್ಳೂರು ಹೋಬಳಿಯ ಅಂಚೆಭೂವನಹಳ್ಳಿ ಗ್ರಾಮದ ಶಿವಲಿಂಗೇಗೌಡ ಮತ್ತು ಅವರ ಎರಡನೇ ಪತ್ನಿಯ ಮಗ ಬಾಲಕೃಷ್ಣ ಸೇರಿ ಗುರುವಾರ ರಾತ್ರಿ ಹಿರಿಯ ಪತ್ನಿಯ ಮಗ ಪ್ರಸನ್ನ ಸ್ನಾನದ ಮನೆಯಲ್ಲಿದ್ದಾಗ ಅಲ್ಲಿಗೆ ನುಗ್ಗಿ ಕಣ್ಣಿಗೆ ಖಾರದಪುಡಿ ಎರಚಿ ಕಬ್ಬಿಣದ ರಾಡ್ ಮತ್ತು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಪ್ರಸನ್ನ ಕೂಗಿಕೊಂಡಾಗ ಪಕ್ಕದ ಮನೆಯವರು ಬಂದಿದ್ದಾರೆ. ಅಲ್ಲಿಗೆ ಬಂದ ಸ್ಥಳೀಯರ ಮೇಲೂ ಆರೋಪಿ ಗಳು ದಾಳಿಗೆ ಮುಂದಾಗಿದ್ದು, ಸ್ಥಳದಿಂದ ಪರಾರಿ ಯಾಗಿದ್ದಾರೆ. ನಂತರ ಗ್ರಾಮಸ್ಥರು ಹುಡುಕಾಟ ನಡೆಸಿ ದಾಗ ಗ್ರಾಮದ ಹೊರವಲಯ ದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ನೋಡಿದಾಗ ಬೇರೆ ಬೇರೆ ಸಂಖ್ಯೆಯ ನಂಬರ್ ಪ್ಲೇಟ್ ಮತ್ತು ಕಬ್ಬಿಣದ ರಾಡ್ಗಳೂ ಇದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಸನ್ನ ಜಮೀನು ವಿವಾದದಲ್ಲಿ ಚಿಕ್ಕಪ್ಪನ ಬೆಂಬಲಕ್ಕೆ ನಿಂತಿದ್ದ ಎಂಬ ದ್ವೇಷದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿ ಶಿವಲಿಂಗೇಗೌಡ ಹಿರಿಯ ಪತ್ನಿ ತೀರಿಕೊಂಡ ನಂತರ ಎರಡನೇ ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಜಮೀನು ವಿಚಾರದ ಗಲಾಟೆ ಘಟನೆಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಸನ್ನ ಅವರನ್ನು ಗ್ರಾಮಸ್ಥರು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬೆಳ್ಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.