ಮಂಡ್ಯ: ವೈದ್ಯರು ಗುಣವಂತರಾಗಿ ನಡೆದುಕೊಳ್ಳುವ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರ ಮನಸ್ಸು ಗೆಲ್ಲಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಡಾ.ಎಂ.ಎ.ಶೇಖರ್ ಹೇಳಿದರು.
ನಗರದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ 28ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಮತ್ತು ಎರಡನೇ ವರ್ಷದ ಇಂಡುವಾಳು ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಗುಮುಖದಿಂದ ಇರುವ ವ್ಯಕ್ತಿಯನ್ನು ಯಾರೂ ಸೋಲಿಸಲು ಸಾಧ್ಯವಾಗುವುದಿಲ್ಲ. ನಾನೊಬ್ಬ ರೋಗಿಯಾಗಿದ್ದರೆ ವೈದ್ಯರಿಂದ ಏನು ಬಯಸುತ್ತೇನೆ ಎಂಬುದನ್ನು ವೈದ್ಯರು ಸ್ವತಃ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನದನಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಬೇವಿನಹಳ್ಳಿ ಬಿ.ಎಸ್.ಸ್ಫೂರ್ತಿ, ಹುಲ್ಕೆರೆಕೊಪ್ಪಲು ಎಚ್.ಇ.ಶಶಾಂಕ್ಗೌಡ, ಇಂಡುವಾಳು ಜೆ.ರಾಘವೇಂದ್ರ ಮತ್ತು ಎನ್.ಅರ್ಚನಾ ಇವರಿಗೆ ತಲಾ ₹5 ಸಾವಿರ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.
ಬೆಂಗಳೂರು ಗ್ಯಾಸ್ಟ್ರೋಎಂಟರಾಲಜಿ ಸೈನ್ಸ್ಸ್ ಮತ್ತು ಅಂಗಾಂಗ ಕಸಿ ಸಂಸ್ಥೆ ಸ್ಥಾಪಕ ನಿರ್ದೇಶಕ ಡಾ.ಎನ್.ಎಸ್.ನಾಗೇಶ್ (ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ), ರಾಜ್ಯ ಮಟ್ಟದ ಮಾಜಿ ಕಬಡ್ಡಿ ಆಟಗಾರ ಎಚ್.ಕೆ.ಜಗದೀಶ್ ಚಂದ್ರ (ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ) ಹಾಗೂ ಮೈಸೂರು ವಿದ್ಯಾರಣ್ಯಪುರಂ ನೀಲಮ್ಮ ಅವರಿಗೆ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ತಲಾ ₹25 ಸಾವಿರ ನೀಡಲಾಯಿತು. ಆದಿಚುಂಚನಗಿರಿ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಜನದನಿ ಸಂಸ್ಥೆ ಅಧ್ಯಕ್ಷ ಕೆ.ಜಯರಾಂ, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಕೆ.ಹರೀಶ್ಕುಮಾರ್, ಚಂದಗಾಲು ಲೋಕೇಶ್, ಡಾ.ಆದರ್ಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.