ADVERTISEMENT

ಕಿಕ್ಕೇರಿ: ಕೆಎಸ್‌ನ ಜನ್ಮದಿನ; ಬೇರೊಬ್ಬರ ಚಿತ್ರಕ್ಕೆ ಪೂಜೆ!

ಕವಿಯ ತವರಿನಲ್ಲೇ ನಡೆದ ಘಟನೆ; ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 6:13 IST
Last Updated 27 ಜನವರಿ 2023, 6:13 IST
ಕಿಕ್ಕೇರಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗುರುವಾರ ನಡೆದ ಕೆಎಸ್‌ನ ಜನ್ಮದಿನಾಚರಣೆಯಲ್ಲಿ ಅಲ್ಲಿಯ ಶಿಕ್ಷಕರು, ಸಿಬ್ಬಂದಿ ಬೇರೆ ವ್ಯಕ್ತಿಯೊಬ್ಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವುದು
ಕಿಕ್ಕೇರಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗುರುವಾರ ನಡೆದ ಕೆಎಸ್‌ನ ಜನ್ಮದಿನಾಚರಣೆಯಲ್ಲಿ ಅಲ್ಲಿಯ ಶಿಕ್ಷಕರು, ಸಿಬ್ಬಂದಿ ಬೇರೆ ವ್ಯಕ್ತಿಯೊಬ್ಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವುದು   

ಕಿಕ್ಕೇರಿ: ಒಲವಿನ ಕವಿ ಕಿಕ್ಕೇರಿ ಕೆ.ಎಸ್‌. ನರಸಿಂಹಸ್ವಾಮಿ ಅವರ ಜನ್ಮದಿನದ ಸಮಾರಂಭದಲ್ಲಿ ಬೇರೊಬ್ಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಘಟನೆ ಪಟ್ಟಣದ
ಕರ್ನಾ ಟಕ ಪಬ್ಲಿಕ್‌ ಶಾಲೆಯಲ್ಲಿ ಗುರು ವಾರ ನಡೆದಿದೆ. ಈ ವಿಷಯ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಸೃಷ್ಟಿಸಿದೆ.

ಕೆಎಸ್‌ನ ಹುಟ್ಟೂರಿನ ಶಾಲೆಯಲ್ಲಿ ಅವರ ಜನ್ಮದಿನ ಆಯೋಜನೆ ಮಾಡ ಲಾಗಿತ್ತು. ಶಾಲಾ ಮಕ್ಕಳು, ಶಿಕ್ಷಕರು ಸಮಾರಂಭದಲ್ಲಿದ್ದರು. ಕರ್ನಾಟಕ ಪಬ್ಲಿಕ್‌ ಶಾಲೆ ಶಿಕ್ಷಕರು ಕಾರ್ಯಕ್ರಮದಲ್ಲಿ ಇಟ್ಟಿದ್ದ ಫೋಟೊ ಕೆ.ಎಸ್‌.ನರಸಿಂಹಸ್ವಾಮಿ ಅವರದ್ದಾಗಿರಲಿಲ್ಲ, ಬೇರೆ ಯಾರೋ ಹಿರಿಯರೊಬ್ಬರ ಚಿತ್ರವಾಗಿತ್ತು.

ಕೆಲವರು ಈ ಕುರಿತು ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದಾಗ, ಹಲವು ವರ್ಷಗಳಿಂದ ಇದೇ ಚಿತ್ರಕ್ಕೆ ಪೂಜೆ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ತಿಳಿ ಸಿದರು. ಬೇರೆ ಯಾರದ್ದೋ ಚಿತ್ರವನ್ನು ಕೆಎಸ್‌ನ ಎಂದು ಹಲವು ವರ್ಷಗಳಿಂದ ತೋರಿಸುತ್ತಾ, ಪೂಜಿಸುತ್ತಾ ಬಂದಿರುವ ವಿಷಯ ಗೊತ್ತಾಯಿತು. ಶಿಕ್ಷಕರಿಗೂ ಕೆಸ್‌ಎಸ್‌ನ ಚಿತ್ರ ಗೊತ್ತಿಲ್ಲವೇ ಎಂಬ ಆಶ್ಚರ್ಯ ಸೃಷ್ಟಿಸಿತು.

ADVERTISEMENT

ಬೇರೆಯವರನ್ನು ಕೆಎಸ್‌ನ ಎಂದು ನಂಬಿ ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು, ಭಾವಚಿತ್ರದ ಮುಂದೆ ನಿಂತು ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡಿದ್ದಾರೆ. ಕೆಎಸ್‌ನ ರಚನೆಯ ಪ್ರೇಮ ಕವಿತೆಗಳನ್ನು ಹಾಡಿದರು. ಆದರೂ ಅವರಿಗೆ ಆ ಚಿತ್ರ ಕೆಎಸ್‌ನ ಅವರದ್ದಲ್ಲ ಎಂಬುದು ಗೊತ್ತಾಗಿಲ್ಲ.

ಘಟನೆ ವಿವರ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾಹಿತ್ಯ, ಸಂಗೀತ ಪ್ರೇಮಿಗಳು, ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಹುಟ್ಟೂರಿನಲ್ಲೇ ಕೆಎಸ್‌ನ ಅವರಿಗೆ ಅವಮಾನವಾಗಿದೆ ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ಕೆಎಸ್‌ನ ಅವರ ಮೊಮ್ಮಗಳು ಡಾ.ಮೇಖಲಾ ವೆಂಕಟೇಶ್‌ ಪ್ರತಿಕ್ರಿಯಿಸಿದ್ದು, ‘ತವರಿನಲ್ಲಿ ನಮ್ಮ ತಾತನ ಜನ್ಮದಿನ ಆಚರಣೆ ಮಾಡಿರುವುದು ಖುಷಿಯ ಸಂಗತಿ. ಆದರೆ, ಆ ಶಾಲೆಯ ಶಿಕ್ಷಕರಿಗೆ ಕೆಎಸ್‌ನ ಅವರ ಮುಖವೇ ಗೊತ್ತಿಲ್ಲ ಎಂಬುದು ಬೇಸರ ತರಿಸುತ್ತದೆ. ಜಾಲತಾಣದಲ್ಲಿ ನೋಡಿ ನನಗೆ ದಿಗ್ಭ್ರಮೆಯಾಯಿತು. ನಮ್ಮ ಸ್ಥಿತಿ ಎಂತಹ ಮಟ್ಟಕ್ಕೆ ತಲುಪಿದೆ ಎಂಬ ಆತಂಕವಾಗಿದೆ. ಬೇವಿನ ಬೀಜ
ಬಿತ್ತಿ ಮಾವು ಕೇಳುವ ಸ್ಥಿತಿ ತಲುಪುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಹಳ ವರ್ಷದಿಂದ ಇದೇ ಫೋಟೊ ಬಳಸಲಾಗುತ್ತಿದೆ. ಈ ಭಾವಚಿತ್ರ ಕೆ‌ಎಸ್‌ನ ಅಲ್ಲವಾದರೆ ಮತ್ತ್ಯಾರು ಎನ್ನುವ ಸಂದೇಹ ಮೂಡಿದೆ. ಹಿಂದೆ ಇದ್ದ ಪ್ರಾಚಾರ್ಯರು ಈ ಚಿತ್ರ ಅಳವಡಿಸಿದ್ದರು. ಅವರಿಗೆ ವಿಷಯ ತಿಳಿದಿರಲಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಶಾಲೆಯ ಪ್ರಭಾರ ಪ್ರಾಚಾರ್ಯ ಎಲ್‌.ವಿನೋದ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.