ADVERTISEMENT

ಪುನೀತ್‌ ಸೇವೆ ಅನುಕರಣೀಯ: ಮಂಡ್ಯ ಜಿಲ್ಲಾಧಿಕಾರಿ ಕುಮಾರ ಶ್ಲಾಘನೆ

4ನೇ ವರ್ಷದ ಪುಣ್ಯಸ್ಮರಣೆ: ಜಿಲ್ಲೆಯಾದ್ಯಂತ ಅನ್ನದಾನ, ರಕ್ತದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:06 IST
Last Updated 30 ಅಕ್ಟೋಬರ್ 2025, 5:06 IST
ಮಂಡ್ಯದ ಗಾಂಧಿ ಭವನದಲ್ಲಿ ನಡೆದ ‘ಅಪ್ಪು ಸ್ಮರಣೆ’ಯಲ್ಲಿ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ರಕ್ತದಾನ ಮಾಡಿದರು
ಮಂಡ್ಯದ ಗಾಂಧಿ ಭವನದಲ್ಲಿ ನಡೆದ ‘ಅಪ್ಪು ಸ್ಮರಣೆ’ಯಲ್ಲಿ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ರಕ್ತದಾನ ಮಾಡಿದರು   

ಮಂಡ್ಯ: ‌‘ರಕ್ತ ಕೃತಕವಾಗಿ ಸಿಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಎಲ್ಲರೂ ರಕ್ತದಾನ ಮಾಡುವ ಮನಸು ಮಾಡಬೇಕು. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟ ಪುನೀತ್‌ ರಾಜಕುಮಾರ್‌ ಅವರ ಸೇವೆ ಇಂದಿಗೂ ಪ್ರಸ್ತುತ’ ಎಂದು ಜಿಲ್ಲಾಧಿಕಾರಿ ಕುಮಾರ ಶ್ಲಾಘಿಸಿದರು.

ನಗರದ ಗಾಂಧಿ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್‌, ಸರ್ಕಾರಿ ರಕ್ತನಿಧಿ ಕೇಂದ್ರ (ಮಿಮ್ಸ್‌) ಜೀವಧಾರೆ ಟ್ರಸ್ಟ್‌, ಪುನೀತ್‌ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ‘ಅಪ್ಪು ಸ್ಮರಣೆ’ ಅಂಗವಾಗಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಗುವಿನ ಒಡೆಯ’ ಎಂದೇ ಖ್ಯಾತಿ ಪಡೆದ ಪುನೀತ್‌ ಅವರ ಹೆಸರಿನಲ್ಲಿ ಇಂತಹ ಸಾಮಾಜಿಕವಾದ ಕಾರ್ಯಕ್ರಮ ರೂಪಿಸಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾದಂತಹ ಸಮಾಜದಲ್ಲಿ ಸೇವೆ ಮಾಡುತ್ತಿರುವುದು ಮತ್ತಷ್ಟು ಹೆಚ್ಚಾಗಬೇಕು. ಪುನೀತ್‌ ಅವರ ಸೇವೆಯನ್ನೂ ಇಂದಿಗೂ ಸ್ಮರಿಸುತ್ತಿರುವ ನಿಮ್ಮ ಅಭಿಮಾನಕ್ಕೆ ರಕ್ತದಾನ ಶಿಬಿರವು ಸಾಕ್ಷಿಯಾಗಿದೆ’ ಎಂದರು.

ADVERTISEMENT

ಶಾಸಕ ಪಿ.ರವಿಕುಮಾರ್ ಮಾತನಾಡಿ, ‘ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣೆ ಮಂಡ್ಯದಲ್ಲಿ ಅಭಿಮಾನಿಗಳಿಂದ ನಡೆಯುತ್ತಿರುವುದು ಪುಣ್ಯದ ಕೆಲಸವಾಗಿದೆ. ಇಲ್ಲಿ ಜೀವಧಾರೆ ಟ್ರಸ್ಟ್‌ ಹಾಗೂ ರೆಡ್‌ಕ್ರಾಸ್ ಸಂಸ್ಥೆಯವರು ರಕ್ತದ ಕೊರತೆ ನೀಗಿಸಲು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಜೀವಧಾರೆ ಟ್ರಸ್ಟ್‌ನ ಅಧ್ಯಕ್ಷ ಎಸ್‌.ಎಂ.ನಟರಾಜು ಮಾತನಾಡಿ, ‘ದೇವರಂತೆ ಪ್ರೀತಿಸುವ ಅಪ್ಪು ಅವರ ಅಭಿಮಾನಿಗಳು ಸಹ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಇಂತಹ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಮ್ಮ ಟ್ರಸ್ಟ್‌ ಹಾಗೂ ವಿವಿಧ ಇಲಾಖೆಗಳ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿ.ಸಿ.ಸುನೀಲ್‌, ಮಂಗಲ ಯೋಗೀಶ್‌ ಅವರನ್ನು ಸನ್ಮಾನಿಸಲಾಯಿತು.

ರೆಡ್‌ಕ್ರಾಸ್‌ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿ.ಪಂ. ಸಿಇಒ ಕೆ.ಆರ್‌.ನಂದಿನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಭಿಮಾನಿಗಳಾದ ಹೇಮಂತ್‌, ರಾಜು, ಸಿದ್ದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.