
ಮಳವಳ್ಳಿ: ‘ಭಾರತೀಯ ಬೌದ್ಧ ಮಹಾಸಭಾವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಸಂಘಟನೆಯೊಂದಿಗೆ ಬುದ್ಧನ ಮಾರ್ಗವನ್ನು ಗ್ರಾಮೀಣ ಜನರಿಗೆ ತಿಳಿಸಿ ಬೌದ್ಧ ಧರ್ಮದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ರಾಜ್ಯ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಕರೆ ನೀಡಿದರು.
ಪಟ್ಟಣದ ಭಾರತೀಯ ಬೌದ್ಧ ಮಹಾಸಭಾದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬುದ್ಧನ ಸಂದೇಶಗಳು ನಾಡಿಗೆ ದಾರಿದೀಪವಾಗಲಿವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬೌದ್ಧ ಸಮ್ಮೇಳನವನ್ನು ಆಯೋಜನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಮಾರ್ಕಾಲು ನಟರಾಜು ಮಾತನಾಡಿ, ತಾಲ್ಲೂಕಿನಲ್ಲಿ 2 ಸಾವಿರಕ್ಕೂ ಅಧಿಕ ಸದಸ್ಯರನ್ನು ಸಂಘಕ್ಕೆ ನೋಂದಾಯಿಸಿ ರಾಜ್ಯ ಮಟ್ಟದ ಬೌದ್ಧ ಸಮ್ಮೇಳನಕ್ಕೆ ಮುಂದಾಗಲಿದ್ದೇವೆ. ಪದಾಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಮುಖಂಡರಾದ ವಿಜಯ್ ಕುಮಾರ್, ಚಂದ್ರಶೇಖರ್, ಸಿದ್ದರಾಜು, ಯತೀಶ್, ನಂಜುಂಡಸ್ವಾಮಿ, ಸಿಕ್ರೇಶ್, ಅಶೋಕ್, ಅರವಿಂದ್, ಸ್ವಾಮಿ, ನಾಗೇಂದ್ರ, ಕುಮಾರ್, ಸುಧಾಕರ್, ಮಹೇಶ್ ಕುಮಾರ್, ಸಂದೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.