ADVERTISEMENT

ಶ್ರೀರಂಗಪಟ್ಟಣ: ಕಾವೇರಿ ನದಿ ವಿಡಿಯೊ ಮಾಡುತ್ತಿದ್ದ ಆಟೊ ಚಾಲಕ ನೀರುಪಾಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 13:16 IST
Last Updated 7 ಜುಲೈ 2025, 13:16 IST
   

ಶ್ರೀರಂಗಪಟ್ಟಣ: ಕಾವೇರಿ ನದಿ ದಡದಲ್ಲಿ ನಿಂತು ವಿಡಿಯೊ ಮಾಡುತ್ತಿದ್ದ ಆಟೊ ಚಾಲಕನೊಬ್ಬ ಆಯತಪ್ಪಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ತಾಲ್ಲೂಕಿನ ಬೆಳಗೊಳ ಸಮೀಪದ ಭಂಭಂ ಸರ್ವಧರ್ಮ ಆಶ್ರಮದ ಬಳಿ ಭಾನುವಾರ ಸಂಜೆ ನಡೆದಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಉಲ್ಲಂಗಾಲ ಗ್ರಾಮದ ಮಲ್ಲೇಶ್ ಅವರ ಮಗ ಮಹೇಶ್ (30) ನದಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ.

ತನ್ನ ಸ್ನೇಹಿತ ಕೃಷ್ಣ ಎಂಬುವರ ಜತೆ ಇಲ್ಲಿಗೆ ಬಂದಿದ್ದ ಮಹೇಶ್ ಭಂಭಂ ಆಶ್ರಮದ ಬಳಿ ನದಿ ತೀರದಲ್ಲಿ ನಿಂತು ವಿಡಿಯೊ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕೃಷ್ಣ ತಕ್ಷಣ ಕೂಗಿಕೊಂಡಿದ್ದಾರೆ. ಜನರು ಸ್ಥಳಕ್ಕೆ ಬರುವಷ್ಟರಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಮಹೇಶ್ ಕೊಚ್ಚಿ ಹೋಗಿದ್ದಾರೆ.

ADVERTISEMENT

‘ವಿಡಿಯೊ ಮಾಡುವ ಮುನ್ನ ಮಹೇಶ್ ಮದ್ಯಪಾನ ಮಾಡಿದ್ದರು. ನದಿಯ ಅಂಚಿನ ಕಟ್ಟೆ ಮೇಲೆ ನಿಂತು ವಿಡಿಯೊ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದರು’ ಎಂದು ಕೃಷ್ಣ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಗ್ನಿಶಾಮಕ ಠಾಧಿಕಾರಿ ಅಂಬರೀಶ್ ಎನ್‌. ಉಪ್ಪಾರ, ಸಹಾಯಕ ಅಧಿಕಾರಿ ಕೆ.ಪಿ. ಪರಮೇಶ್ ಅವರ ತಂಡ ಸೋಮವಾರ ಮಹೇಶ್‌ ಅವರಿಗಾಗಿ ಶೋಧ ಕಾರ್ಯ ನಡೆಸಿತು. ಕೆಆರ್‌ಎಸ್‌ ಜಲಾಶಯದಿಂದ 23 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಬಿಟ್ಟಿರುವುದರಿಂದ ನೀರಿನ ಸೆಳೆತ ಹೆಚ್ಚಾಗಿದ್ದು ಪತ್ತೆ ಕಾರ್ಯಕ್ಕೆ ತೊಡಕಾಗಿದೆ ಎಂದು ಕೆಆರ್‌ಎಸ್‌ ಠಾಣೆ ಪಿಎಸ್‌ಐ ರಮೇಶ್ ಕರ್ಕಿಕಟ್ಟಿ ತಿಳಿಸಿದ್ದಾರೆ.

ನಿಗಮದ ಎಚ್ಚರಿಕೆ:

ಕೆಆರ್‌ಎಸ್‌ ಜಲಾಶಯದಿಂದ ನದಿಗೆ 50 ಸಾವಿರ ಕ್ಯೂಸೆಕ್‌ವರೆಗೆ ನೀರು ಬಿಡಲಿದ್ದು, ನದಿ ತೀರಕ್ಕೆ ಜನರು ತೆರಳದಂತೆ ಕ್ರಮ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಹಶೀಲ್ದಾರ್‌ ಅವರಿಗೆ ಪತ್ರ ಬರೆದಿದ್ದಾರೆ. ನದಿ ತೀರದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೊ ಅಥವಾ ಫೋಟೊ ತೆಗೆಯುವುದಕ್ಕೆ ಅವಕಾಶ ನೀಡಬಾರದು. ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.