ಮಂಡ್ಯ: 'ದೇಶದ 26 ರಾಜ್ಯಗಳಲ್ಲಿ ಕಾಂಗ್ರೆಸ್ ಉಸಿರಾಟ ನಿಂತಿದೆ. ಕರ್ನಾಟಕದಲ್ಲಿ ಅಷ್ಟು ಇಷ್ಟು ಉಸಿರಾಡುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಇಲ್ಲೂ ಕಾಂಗ್ರೆಸ್ ಉಸಿರು ನಿಲ್ಲಲಿದೆ' ಎಂದು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.
ವಿಧಾನ ಪರಿಷತ್ ಚುನಾವಣೆ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
'400 ಸ್ಥಾನಗಳಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್ ಈಗ 40-45 ಸ್ಥಾನದಲ್ಲಿ ಗೆಲ್ಲುವ ಸ್ಥಿತಿಗೆ ಬಂದು ನಿಂತಿದೆ. ಲೋಕಸಭೆಯಲ್ಲಿ ಪ್ರಾತಿನಿಧ್ಯ ಇಲ್ಲದೆ ಮರ್ಯಾದೆ ಕಳೆದುಕೊಂಡಿದೆ' ಎಂದರು.
'ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಅವರ ಪಕ್ಷದಲ್ಲಿ ನಾವೆಲ್ಲಾ ಸದಸ್ಯರಾಗಿದ್ದೇವೆ ಎಂಬುದೇ ನಮ್ಮ ಪುಣ್ಯ' ಎಂದರು.
'ನಾನು ಈಗಿನಿಂದಲೇ ರಾಜ್ಯ ಪ್ರವಾಸ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ 140 ಸ್ಥಾನ ಗಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ' ಎಂದರು.
'ವಿಧಾನ ಪರಿಷತ್ ಚುನಾವಣೆ, ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಅಭ್ಯರ್ಥಿ ಇಲ್ಲದ ಕಡೆಯಲ್ಲಿ ಬೆಂಬಲ ನೀಡುವಂತೆ ಕೇಳಿದ್ದಾರೆ. ನಮ್ಮ ಅಭ್ಯರ್ಥಿ ಇರುವ ಕಡೆ ಹೊಂದಾಣಿಕೆ ಇಲ್ಲ' ಎಂದರು.
ಇದನ್ನೂ ಓದಿ:ಸಂಪುಟ ವಿಸ್ತರಣೆಯ ನಿರೀಕ್ಷೆ ಇದೆ: ಬಿಎಸ್ವೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.