ADVERTISEMENT

ಮಂಡ್ಯ: ಸಕ್ರಿಯ ಪ್ರಕರಣಕ್ಕಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಳ

ಸೋಂಕಿತರ ಸಂಖ್ಯೆ 2,292ಕ್ಕೆ ಏರಿಕೆ, 1,026 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 15:20 IST
Last Updated 6 ಆಗಸ್ಟ್ 2020, 15:20 IST
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಗುರುವಾರ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಗುರುವಾರ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಮಂಡ್ಯ: ಗುರುವಾರ ಹೊಸದಾಗಿ 134 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 2,292ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಅದು ಸಕ್ರಿಯ ಪ್ರಕರಣಗಳಿಗಿಂತಲೂ ಮುಂದಿದೆ.

ಗುರುವಾರ ಜಿಲ್ಲಾಸ್ಪತ್ರೆಯಿಂದ 63 ಮಂದಿ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 1,246ಕ್ಕೆ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,026 ಇದೆ. ಬಹುತೇಕ ಮಂದಿ 7–8 ದಿನಕ್ಕೆ ಗುಣಮುಖರಾಗುತ್ತಿದ್ದಾರೆ. ಕೋವಿಡ್‌ ಕಾರ್ಯಸೂಚಿಯಂತೆ 14 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ.

ಗುರುವಾರ ಪತ್ತೆಯಾದ 134 ಮಂದಿ ಸೋಂಕಿತರಲ್ಲಿ 41 ಮಂದಿ ಮಂಡ್ಯ ತಾಲ್ಲೂಕಿಗೆ ಸೇರಿದ್ದಾರೆ. ಅವರಲ್ಲಿ 21 ಮಂದಿ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಮದ್ದೂರು ತಾಲ್ಲೂಕಿನ 24 ಮಂದಿಯಲ್ಲಿ ಸೋಂಕು, 4 ಮಂದಿಯಲ್ಲಿ ರೋಗ ಲಕ್ಷಣ ಕಂಡುಬಂದಿದೆ. ನಾಗಮಂಗಲ ತಾಲ್ಲೂಕಿನ 22 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 6 ಮಂದಿಯಲ್ಲಿ ರೋಗ ಲಕ್ಷಣ ಕಂಡುಬಂದಿದೆ.

ADVERTISEMENT

ಕೆ.ಆರ್‌.ಪೇಟೆ ತಾಲ್ಲೂಕಿನ 15 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಅವರ ಪೈಕಿ 7 ಮಂದಿಯಲ್ಲಿ ಜ್ವರವಿದೆ. ಪಾಂಡವಪುರ ತಾಲ್ಲೂಕಿನ 18 ಮಂದಿಯಲ್ಲಿ ಸೋಂಕು, 5 ಮಂದಿಯಲ್ಲಿ ಜ್ವರ ಕಂಡು ಬಂದಿದೆ. ಮಳವಳ್ಳಿಯ 12 ಮಂದಿಯಲ್ಲಿ ಸೋಂಕು, ಮೂವರಲ್ಲಿ ಶೀತಜ್ವರ ಕಂಡುಬಂದಿದೆ.

ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಮಂಡ್ಯ ತಾಲ್ಲೂಕಿನ 23 ಮಂದಿ, ನಾಗಮಂಗಲ 10, ಮದ್ದೂರು 8, ಶ್ರೀರಂಗಪಟ್ಟಣ 6, ಕೆ.ಆರ್‌.ಪೇಟೆ 5, ಪಾಂಡವಪುರ ತಾಲ್ಲೂಕಿನ ಒಬ್ಬರು ಬಿಡುಗಡೆಯಾಗಿದ್ದಾರೆ.

ಕೋವಿಡ್‌ ಕೇಂದ್ರಗಳಿಗೆ ಭೇಟಿ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಗುರುವಾರ ನಗರದ ಕೆರೆ ಅಂಗಳದಲ್ಲಿರುವ ಕೋವಿಡ್‌ ಕೇರ್‌ ಕೇಂದ್ರ, ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಸಲುವಾಗಿ 270 ಹಾಸಿಗೆ ಹಾಸಿಗೆ ಸಾಮರ್ಥ್ಯದ ಕೇಂದ್ರ ರೂಪಿಸಬೇಕು. ಕೋವಿಡ್‌ ರೋಗಿಗಳನ್ನು ಉಪಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ವ್ಯಕ್ತಿ ಸಾವು: 20ಕ್ಕೆ ಏರಿಕೆ
ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1,15,822ನೇ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಜುಲೈ 28ರಂದು ಅವರಿಗೆ ಕೋವಿಡ್‌–19 ದೃಢಪಟ್ಟಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಕೋವಿಡ್‌ ಕಾರ್ಯಸೂಚಿಯಂತೆ ಗುರುವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಲ್ಲಿಯವರೆಗೆ ಜಿಲ್ಲೆಯಲ್ಲಿ 20 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.