ಮಂಡ್ಯ: ಕೋವಿಡ್ನಿಂದಾಗಿ ಪೋಷಕರು ಮೃತಪಟ್ಟ ಪರಿಣಾಮ ಜಿಲ್ಲೆಯಲ್ಲಿ 116 ಮಕ್ಕಳ ಬದುಕು ಅತಂತ್ರಗೊಂಡಿದೆ. ಏಕ ಪೋಷಕರ ಆಸರೆಯಲ್ಲಿರುವ 113 ಈ ಮಕ್ಕಳಿಗೆ ಸರ್ಕಾರದ ಸಹಾಯಾಸ್ತದ ಅಗತ್ಯವಿದೆ.
ಕೋವಿಡ್ನಿಂದಾಗಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿರುವ ಮಕ್ಕಳ ಬದುಕು ಸಂಕಷ್ಟ ಸ್ಥಿತಿಯಲ್ಲಿದೆ. ಏಕ ಪೋಷಕರ ಆರೈಕೆಯಲ್ಲಿ ಬೆಳೆಯುತ್ತಿರುವ ಮಕ್ಕಳ ಭವಿಷ್ಯಕ್ಕೆ ಸಹಾಯದ ಅಗತ್ಯವಿದೆ. ಬಹುತೇಕ ಏಕ ಪೋಷಕರ ಆರ್ಥಿಕ ಸ್ಥಿತಿ ತೀರಾ ಹಿಂದುಳಿದಿದ್ದು ಮಕ್ಕಳ ಭವಿಷ್ಯದಲ್ಲಿ ಕತ್ತಲು ಮೂಡಿದೆ. ಹಲವು ಮಕ್ಕಳು ಅಜ್ಜಿ–ತಾತಂದಿರ ಮನೆಯಲ್ಲಿ ಬೆಳೆಯುತ್ತಿದ್ದು ಶಿಕ್ಷಣದಿಂದಲೂ ವಂಚಿತವಾಗುವ ಅಪಾಯವಿದೆ.
ಮೂವರು ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಮಗುವೊಂದು ನಾಗಮಂಗಲ ತಾಲ್ಲೂಕು ಪಿ.ಚಿಟ್ಟನಹಳ್ಳಿ ಗ್ರಾಮದ ಸಂಬಂಧಿಕರ ಆಶ್ರಯದಲ್ಲಿದೆ. ಇಬ್ಬರು ಮಕ್ಕಳು ಮದ್ದೂರು ತಾಲ್ಲೂಕು ಶಿವಪುರದಲ್ಲಿ ಅಜ್ಜಿ ಮನೆಯಲ್ಲಿದ್ದಾರೆ. ಈ ಮೂವರೂ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೀಡಾದ 0–17 ವರ್ಷದೊಳಗಿನ 116 ಮಕ್ಕಳನ್ನು ಗುರುತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳನ್ನು ಗುರುತಿಸಲಾಗಿದೆ. ಆ ಮಕ್ಕಳ ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ ಸಾಮಾಜಿಕ ತನಿಖಾ ವರದಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
‘ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳು ಕೋವಿಡ್ನಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿರುವ ಸಮೀಕ್ಷೆ ಅನುಮಾನಾಸ್ಪದವಾಗಿದೆ. ಮತ್ತೊಮ್ಮೆ ಸಮರ್ಪಕ ರೀತಿಯಲ್ಲಿ ಸಂಕಷ್ಟ ಸ್ಥಿತಿಯಲ್ಲಿರುವ ಮಕ್ಕಳ ಸಮೀಕ್ಷೆ ನಡೆಸಬೇಕು’ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ಸಮೀರ್ ಒತ್ತಾಯಿಸಿದರು.
ಸಿಗುವ ಸಹಾಯ ಏನು?: ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳು, ಏಕ ಪೋಷಕರ ಆಶ್ರಯದಲ್ಲಿ ಬೆಳೆಯುತ್ತಿರುವ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮ ರೂಪಿಸಿದೆ. ಆ ಮಕ್ಕಳ ಸಾಮಾಜಿಕ ಸ್ಥಿತಿ ವರದಿ ಅನ್ವಯ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮಕ್ಕಳ ರಕ್ಷಣಾ ಸಮಿತಿ ನಿರ್ಧಾರ ಮಾಡಲಿದೆ.
‘ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದ ಅನ್ವಯ ಮಕ್ಕಳ ಜೀವನಕ್ಕೆ ಸಹಾಯವಾಗುವಂತೆ 36 ತಿಂಗಳವರೆಗೆ ತಲಾ ₹ 1 ಸಾವಿರ ಸಹಾಯಧನ ನೀಡಬಹುದು. ಇಲ್ಲದಿದ್ದರೆ 18 ವರ್ಷದವರೆಗೆ ಮಕ್ಕಳಿಗೆ ಆಶ್ರಯ ನೀಡುವ, ಅವರ ಶೈಕ್ಷಣಿಕ ವೆಚ್ಚ ಭರಿಸುವ ಜವಾಬ್ದಾರಿಯನ್ನು ಸರ್ಕಾರವೇ ಹೊರಲಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೇತನ್ ತಿಳಿಸಿದರು.
ಇಂದು ಸಚಿವೆ ಭೇಟಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಗುರುವಾರ ಜಿಲ್ಲಾ ಭೇಟಿ ಕೈಗೊಂಡಿದ್ದು ಕೋವಿಡ್ನಿಂದ ಸಂಕಷ್ಟದಲ್ಲಿರುವ ಮಕ್ಕಳ ವಿವರ ಪಡೆಯಲಿದ್ದಾರೆ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
*****
ಮಗುವನ್ನು ನಾವೇ ಸಾಕ್ತೀವಿ...
ಕೋವಿಡ್ನಿಂದ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ 1 ತಿಂಗಳು 5 ದಿನದ ಮಗು ನಾಗಮಂಗಲ ತಾಲ್ಲೂಕು ಪಿ.ಚಿಟ್ಟನಹಳ್ಳಿ ಗ್ರಾಮದ ಮಾವನ (ತಾಯಿಯ ತಮ್ಮ) ಮನೆಯಲ್ಲಿ ಬೆಳೆಯುತ್ತಿದೆ.
‘ನನ್ನ ಅಕ್ಕನ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೇವೆ. ಸರ್ಕಾರ ಸೌಲಭ್ಯ ಕೊಟ್ಟರೆ ಸ್ವಾಗತ, ಸೌಲಭ್ಯ ಕೊಡದಿದ್ದರೂ ಮಗುವನ್ನು ಸಾಕಲು ನಮಗೆ ಯಾವುದೇ ಅಡ್ಡಿ ಇಲ್ಲ’ ಎಂದು ಮಗುವಿನ ಮಾವ ಮಂಜು ತಿಳಿಸಿದರು.
***
ಶುಕ್ರವಾರ ಸಚಿವರ ಸಭೆ ಇದ್ದು ಸಕಲ ಮಾಹಿತಿಯನ್ನು ಅವರ ಗಮನಕ್ಕೆ ತರುತ್ತೇವೆ. 3ನೇ ಅಲೆ ನಿರ್ವಹಣೆಗೆ ಕೈಗೊಂಡ ಸಿದ್ಧತೆಗಳನ್ನೂ ತಿಳಿಸುತ್ತೇವೆ
–ಎಸ್.ರಾಜಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.