ಶ್ರೀರಂಗಪಟ್ಟಣ: ತಾಲ್ಲೂಕಿನ ನೀಲನಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ದುರಸ್ತಿ ಮಾಡಬೇಕಾದ ಕಟ್ಟಡಕ್ಕೆ ಬಣ್ಣ ಬಳಿದು ಹುಳುಕು ಮುಚ್ಚಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಲಾ ಕಟ್ಟಡದ ಮೇಲ್ಭಾಗದ ಗೋಡೆಯ ಇಟ್ಟಿಗೆಗಳು ಕುಸಿದು ಬೀಳುತ್ತಿವೆ. ಹೆಂಚುಗಳು ಉದುರುತ್ತಿವೆ. ಕಿಟಕಿ ಮತ್ತು ಬಾಗಿಲುಗಳು ಗೆದ್ದಿಲು ಹಿಡಿದಿದ್ದು, ಬೀಳುವ ಸ್ಥಿತಿಯಲ್ಲಿವೆ. ಮಕ್ಕಳ ಮೇಲೆ ಹೆಂಚು, ಇಟ್ಟಿಗೆ ಬಿದ್ದಿರುವ ಉದಾಹರಣೆಯೂ ಉಂಟು.
ಶಿಥಿಗೊಂಡಿರುವ ಶಾಲಾ ಕಟ್ಟಡವನ್ನು ದುರಸ್ತಿ ಮಾಡಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಶಿಥಿಲಗೊಂಡಿರುವ ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತಿದೆ. ಸರ್ಕಾರದ ಹಣ ಪೋಲಾಗುತ್ತಿದೆ. ಈ ಅವೈಜ್ಞಾನಿಕ ಕ್ರಮವನ್ನು ಶಾಲೆಯ ಶಿಕ್ಷಕರು ಏಕೆ ಪ್ರಶ್ನಿಸಿಲ್ಲ? ಎಂದು ಗ್ರಾಮದ ಮುಖಂಡ ಮಂಜುನಾಥ್ ಪ್ರಶ್ನಿಸಿದ್ದಾರೆ.
‘ನೀಲನಕೊಪ್ಪಲು ಸರ್ಕಾರಿ ಶಾಲೆಯ ಕಟ್ಟಡಕ್ಕೆ ಇತ್ತೀಚೆಗೆ ಯಾರೋ ಬಂದು ಬಣ್ಣ ಬಳಿದು ಹೋದರು. ಅವರ ಹೆಸರು ಗೊತ್ತಿಲ್ಲ. ಯಾವ ಬಾಬ್ತಿನ ಅನುದಾನದಲ್ಲಿ ಬಣ್ಣ ಬಳಿದಿದ್ದಾರೆ ಎಂಬುದೂ ತಿಳಿದಿಲ್ಲ. ನಮಗೆ ಅವರು ಹೇಳಲೂ ಇಲ್ಲ; ನಾವು ಕೇಳಲೂ ಇಲ್ಲ. ಗೋಡೆ, ಕಿಟಕಿ, ಬಾಗಿಲುಗಳು ಶಿಥಿಲವಾಗಿದ್ದು ದುರಸ್ತಿ ಮಾಡಿಸುವ ಬದಲು ಬಣ್ಣ ಬಳಿದು ಹೋಗಿದ್ದಾರೆ. ಈ ಬಗ್ಗೆ ಊರಿನವರನ್ನೇ ಕೇಳಿ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್ ಹೇಳುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ‘ಶಿಥಿಲಗೊಂಡಿರುವ ಶಾಲೆಯ ಕಟ್ಟಡವನ್ನು ದುರಸ್ತಿ ಮಾಡದೆ ಬಣ್ಣ ಬಳಿದು ಹುಳುಕು ಮುಚ್ಚುವುದು ಸರಿಯಲ್ಲ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿಯಿಂದ ಮಾಹಿತಿ ಪಡೆಯುತ್ತೇನೆ. ಲೋಪ ನಡೆದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.