ಭಾರತೀನಗರ: ಸಮೀಪದ ಅಣ್ಣೂರು ಗ್ರಾಮದಲ್ಲಿ ದಸರಾ ಹಬ್ಬದ ಅಂಗವಾಗಿ ಗ್ರಾಮ ದೇವತೆಗಳೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.
ಗ್ರಾಮದೇವತೆಗಳಾದ ಮಹಾಕಾಳಮ್ಮ, ಮಾರಮ್ಮ, ಅಟ್ಟಿಮಾರಮ್ಮ ಪೂಜೆಗಳು, ಸಿದ್ದೇಶ್ವರಸ್ವಾಮಿ ಸತ್ತಿಗೆ, ಈಶ್ವರ ಹಾಗೂ ತಿಮ್ಮಪ್ಪನ ವಾಹನ, ಮಹಾಕಾಳಿ ದೇವಿ ನಂದಿಕಂಭ, ಕೊರವಂಜಿ ಬುಟ್ಟಿ ಸಮೇತ ಗ್ರಾಮದಲ್ಲಿನ ಪುಟ್ಟಕಟ್ಟೆಗೆ ತೆರಳಿ ಅಗ್ನಿಪೂಜೆ ನೆರವೇರಿಸಿ, ಹೂವು-ಹೊಂಬಾಳೆ ಮುಡಿಸಿ ನಂತರ ವಿವಿಧ ಚರ್ಮವಾದ್ಯ ಮೇಳ, ಕೊಂಬು, ಕಹಳೆ, ಕತ್ತಿಗಳೊಂದಿಗೆ ಬಾಯಿಬೀಗ ಹಾಕಿಸಿಕೊಂಡ ಭಕ್ತರನ್ನು ಕರೆದುಕೊಂಡು ಬನ್ನಿಮಂಟಪಕ್ಕೆ ಗ್ರಾಮದ ಎಲ್ಲಾ ಜನರೊಂದಿಗೆ ತೆರಳಿದವು.
ಗ್ರಾಮದ ಬನ್ನಿಮಂಟಪದ ಬಳಿ ಪೂಜೆ ಮಗಿದ ನಂತರ ಭಕ್ತರು ಹಾಕಿಸಿಕೊಂಡ ಬಾಯಿಬೀಗ ತೆರವುಗೊಳಿಸಲಾಯಿತು. ಎಲ್ಲಾ ಜನರಿಗೆ ಹಸಕ್ಕಿ ತಂಬಿಟ್ಟು ಪ್ರಸಾದ ವಿತರಿಸಲಾಯಿತು.
ಮಂಟಪ ಪೂಜೆ ಮುಗಿದ ನಂತರ ಮಾರಮ್ಮದೇವಿ ರಂಗಕ್ಕೆ ಬಂದು ಎಲ್ಲಾ ದೇವರು ಮೆರವಣಿಗೆ ನಡೆಸಿದವು. ಮೆರವಣಿಗೆ ಮುಗಿದ ಮೇಲೆ ಇಡೀ ಗ್ರಾಮದ ಎಲ್ಲಾ ಬೀದಿಗಳಿಗೆ ತೆರಳಿ ಆರತಿ ಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.