ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಎದುರು ಜಮಾಯಿಸಿದ ವಿವಿಧ ವಿಭಾಗಳ ನೌಕರರು ಘೋಷಣೆ ಕೂಗಿದರು.
2018-19ನೇ ಸಾಲಿನಲ್ಲಿ ಸೇವೆ ಸುರಕ್ಷ ಸೆಕ್ಯೂರಿಟಿ ಸರ್ವಿಸಸ್ ಗುತ್ತಿಗೆ ಸಂಸ್ಥೆಯ ಮೂಲಕ ಸಾಮಾಗ್ರಿ ನಿರ್ವಾಹಕ ಸೇರಿದಂತೆ ವಿವಿಧ ವಿಭಾಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸಿರುವವರಿಗೆ ಕೇವಲ ಎರಡು ತಿಂಗಳ ವೇತನ ನೀಡಿ ಇನ್ನುಳಿದ ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವೇತನ ಸಂಬಂಧ ಹಲವು ಬಾರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ವಾಹಕರಿಗೆ ಮನವಿ ಸಲ್ಲಿಸಿದ್ದರೂ ಸಬೂಬು ಹೇಳುತ್ತಿದ್ದಾರೆ. ಸಂಸ್ಥೆಯ ಅಧಿಕಾರಿಗಳನ್ನು ಕೇಳಿದರೆ ನಮಗೆ ಯಾವುದೇ ಹಣ ಸಂದಾಯವಾಗಿಲ್ಲ. ಸಂಸ್ಥೆಯೇ ನೇರವಾಗಿ ಹಣ ಪಾವತಿ ಮಾಡುತ್ತದೆ ಎನ್ನುತ್ತಿದ್ಧಾರೆ. 1952ರ ಕಾರ್ಮಿಕ ಕಾಯ್ದೆ ಪ್ರಕಾರ ಮೈಷುಗರ್ ಸಂಸ್ಥೆಯೇ ವೇತನ ಪಾವತಿ ಮಾಡಬೇಕಾಗಿದೆ ಎಂದರು.
ಕಾರ್ಖಾನೆಯ ವಿವಿಧ ವಿಭಾಗದ ಎಚ್.ಎಂ.ರಘು, ರಮೇಶ್, ರಾಮದಾಸ್. ಎಸ್.ಸಂಜೀವ್ಕುಮಾರ್, ಸಮಿತ್ ಕುಮಾರ್, ಗಂಗಾಧರ್, ಎಂ.ಮಹೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.