ಪಾಂಡವಪುರ ಪಟ್ಟಣದ ಹಾರೋಹಳ್ಳಿ ಸಮೀಪದ ರಸ್ತೆ ವಿಸ್ತರಣೆ ಕಾಮಗಾರಿಯ ಅಪೂರ್ಣವಾಗಿದ್ದು ವಾಹನ ಸವಾರರಿಗೆ ಕಷ್ಟಕರವಾಗಿದೆ (ಎಡಚಿತ್ರ). ವಿಭಜಕ ರಸ್ತೆಗೆ ವಿದ್ಯುತ್ ದೀಪಗಳು ಮತ್ತು ಸೂಚನಾ ಫಲಕ ಇಲ್ಲದಿರುವುದು
ಪಾಂಡವಪುರ: ಪಟ್ಟಣದ ಐದು ದೀಪ ವೃತ್ತದಿಂದ ಹಾರೋಹಳ್ಳಿ ಅಗ್ನಿಶಾಮಕ ದಳದ ಕೇಂದ್ರದವರೆಗೂ ಬೀದಿ ದೀಪವಿಲ್ಲದೇ ಸಂಚಾರಕ್ಕೆ ಕಷ್ಟವಾಗಿ ಅಪಘಾತ ಸಂಭವಿಸುತ್ತಿದ್ದು ವಾಹನ ಸವಾರರು ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಯಾಗಿದ್ದರೂ ಕೆಲವೆಡೆ ಗುಂಡಿ ಬಿದ್ದಿದ್ದು, ನಿತ್ಯವೂ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದೆ. 2015–16ರಲ್ಲಿ ತೂಬಿನಕೆರೆಯಿಂದ ಪಾಂಡವಪುರ ಪಟ್ಟಣದ ಮೂಲಕ ಹಾದು ಹೋಗಿ ಹೊಸಸಾಯಪನಹಳ್ಳಿ ವರೆಗೆ ₹ 43 ಕೋಟಿ ವೆಚ್ಚದಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗಿತ್ತು.
2019ರಲ್ಲಿ ಪಾಂಡವ ಪುರದ ಐದು ದೀಪ ವೃತ್ತದಿಂದ ಹಾರೋಹಳ್ಳಿ ಮೂಲಕ ಎಲೆಕೆರೆ–ಹ್ಯಾಂಡ್ ಪೋಸ್ಟ್ವರೆಗಿನ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ, ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಿ ವಿಭಜಕ ರಸ್ತೆ ನಿರ್ಮಾಣ ಮಾಡಲಾಗಿದೆ.
ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಯ ವೇಳೆ ಪಾಂಡವಪುರದಿಂದ ಹಾರೋಹಳ್ಳಿ ವರೆಗೆ ಇದ್ದ ಬೀದಿ ದೀಪ ತೆಗೆದಿದ್ದು, ಈಗ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದರೂ ಬೀದಿ ದೀಪ ಅಳವಡಿಸಿಲ್ಲ. ಹೀಗಾಗಿ ರಾತ್ರಿ ವೇಳೆ ಸಂಚಾರ ಕಷ್ಟವಾಗಿದೆ.
ಇನ್ನೊಂದೆಡೆ ರಸ್ತೆ ಕಾಮಗಾರಿ ವೇಳೆ ಪಂಪ್ಹೌಸ್ ಎದುರಿನ ಒಂದು ಬದಿ ರಸ್ತೆಯಲ್ಲಿ ಎರಡು ಕಡೆ ಅಭಿವೃದ್ಧಿ ಪೂರ್ಣಗೊಳಿಸಿಲ್ಲ. ರಸ್ತೆ ಏರುಪೇರು ಮತ್ತು ಗುಂಡಿಬಿದ್ದಿದೆ. ಅಲ್ಲದೇ ರಸ್ತೆ ಅಭಿವೃದ್ಧಿ ಪೂರ್ಣಗೊಂಡ ಮೂರು ವರ್ಷಗಳಲ್ಲಿಯೇ ಪಂಪ್ಹೌಸ್ ಎದುರಿನ ರಸ್ತೆ ಗುಂಡಿ ಬಿದ್ದು ಅಪಾಯಕ್ಕೆ ಆಹ್ವಾನ ತಂದೊಡ್ಡಿದೆ.
‘ಈ ರಸ್ತೆಯಲ್ಲಿ ವಿಭಜಕ ನಿರ್ಮಿಸ ಲಾಗಿದೆ. ವಿದ್ಯುತ್ ದೀಪಗಳಿಲ್ಲದೆ ರಸ್ತೆಯಲ್ಲಿ ಕತ್ತಲು ಆವರಿಸಿರುವುದ ರಿಂದ ರಾತ್ರಿ ವೇಳೆ ಸವಾರರಿಗೆ ವಿಭಜಕ ಕಾಣದೆ ಅಪಘಾತ ಹೆಚ್ಚುತ್ತಿವೆ’ ಎಂದು ಹಾರೋಹಳ್ಳಿಯ ಎಚ್.ಪಿ.ಸೋಮಶೇಖರ್, ಚಂದ್ರು ಆರೋಪಿಸಿದ್ದಾರೆ.
ವಿಭಜಕ ರಸ್ತೆಗೆ ರಾತ್ರಿ ವೇಳೆ ಸವಾರರಿಗೆ ಕಾಣುವಂತೆ ಸೂಚನೆ ಫಲಕ ಅಳವಡಿಸಿಲ್ಲದಿರುವುದು ಕೂಡಾ ಅಪಘಾತಕ್ಕೆ ಕಾರಣವಾಗಿದೆ.
‘ಪಟ್ಟಣದಿಂದ ಹಾರೋಹಳ್ಳಿವರೆ ಗಿನ ರಸ್ತೆಯು ಪುರಸಭೆ ವ್ಯಾಪ್ತಿಗೆ ಬರುತ್ತದೆ. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಂದಾಜು ವೆಚ್ಚದ ಪಟ್ಟಿಯಲ್ಲಿ ಪಿಡಬ್ಲ್ಯೂಡಿ ಇಲಾಖೆಯೇ ಬೀದಿ ದೀಪಗಳನ್ನು ಅಳವಡಿಸ ಬೇಕಾಗಿರುವುದರಿಂದ ಪುರಸಭೆ ಮೌನ ವಹಿಸಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಈ ಮಾರ್ಗದಲ್ಲಿ ಗುಂಡಿ ಬಿದ್ದಿರುವ ರಸ್ತೆ, ವಿಭಜಕ ರಸ್ತೆಗೆ ಸೂಚನಾ ಫಲಕ ಹಾಗೂ ಬೀದಿ ದೀಪಗಳನ್ನು ಅಳವಡಿಸಿಲ್ಲ, ಹಾಗಾಗಿ ನಮಗೆ ಸಂಚಾರ ದುಸ್ತರವಾಗಿದೆ ಇನ್ನಾದರೂ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು’ ಎಂದು ವಾಹನ ಸವಾರರಾದ ಕೃಷ್ಣೇಗೌಡ, ರುಕ್ಮಾಂಗದ ಅವರು ಅಸಮಾಧಾನ ಹೊರಹಾಕಿದರು.
ಪಾಂಡವಪುರದಿಂದ ಹಾರೋಹಳ್ಳಿವರೆಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ಮುಖ್ಯವಾಗಿ ಬೀದಿ ದೀಪಗಳನ್ನು ಅಳವಡಿಕೆಗೆ ಶೀಘ್ರ ಕ್ರಮವಹಿಸುವೆ.ಚಿದಾನಂದ, ಎಇ, ಪಿಡಬ್ಲ್ಯೂಡಿ ಇಲಾಖೆ, ಪಾಂಡವಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.