ಪ್ರಾತಿನಿಧಿಕ ಚಿತ್ರ
ಮಳವಳ್ಳಿ: ‘ಪಟ್ಟಣದ ಟೋಲ್ ಗೇಟ್ ಸಮೀಪ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ವೃತ್ತದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಡಿವೈಡರ್ ಸೇರಿದಂತೆ ರಸ್ತೆ ಸುರಕ್ಷಾ ಫಲಕಗಳನ್ನು ಅಳವಡಿಸಬೇಕು’ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಎ. ಚಿಕ್ಕರಾಜು ಒತ್ತಾಯಿಸಿದರು.
‘ಪಟ್ಟಣದ ಮಳವಳ್ಳಿ ಕನಕಪುರ ರಸ್ತೆಯ ಟೋಲ್ ಗೆಟ್ ಬಳಿ ರಸ್ತೆ ಸುರಕ್ಷತಾ ಕ್ರಮಗಳು ಇಲ್ಲದಿರುವುದರಿಂದ ಒಂದು ವರ್ಷದಿಂದ ಹತ್ತಾರು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇಂತಹ ಘಟನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ’ ಎಂದು ಗುರುವಾರ ಪಟ್ಟಣದಲ್ಲಿ ದೂರಿದರು.
‘ಅಪಘಾತ ವಲಯದಲ್ಲಿ ಹೆದ್ದಾರಿ ಮಧ್ಯ ಭಾಗದಲ್ಲಿ ಡಿವೈಡರ್ ಆಳವಡಿಸಬೇಕು. ಏಕ ಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸಂಚಾರ ನಿಯಮಗಳ ನಾಮಫಲಕಗಳು ಹಾಗೂ ಸಿಗ್ನಲ್ ದೀಪಗಳನ್ನು ಜೋಡಿಸಬೇಕು. ಅವೈಜ್ಞಾನಿಕ ಕಾಮಗಾರಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಹೆದ್ದಾರಿ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.