ಮದ್ದೂರು: ಜಿಲ್ಲಾಧಿಕಾರಿ ಕುಮಾರ ಅವರು ಗುರುವಾರ ಪಟ್ಟಣದ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸಾರ್ವಜನಿಕರು ಆರ್ಟಿಸಿ ತಿದ್ದುಪಡಿ, ಪೋಡಿ ತಿದ್ದುಪಡಿ, ಜನನ- ಮರಣ ಪ್ರಮಾಣ ಪತ್ರ ಕುರಿತು ಅರ್ಜಿಗಳನ್ನು ಖುದ್ದು ಸ್ವೀಕರಿಸಿ ಸಾರ್ವಜನಿಕರ ಕುಂದು–ಕೊರತೆಗಳನ್ನು ಆಲಿಸಿದರು.
‘ಅರ್ಜಿಗಳನ್ನು ತಹಶೀಲ್ದಾರ್, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಿ ನಿಯಮಾನುಸಾರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸರ್ಕಾರಿ ಕೆಲಸಗಳಿಗೆ ತಾಲ್ಲೂಕು ಕಚೇರಿಗೆ ವಿನಾಕಾರಣ ಅಲೆದಾಡಿಸಬಾರದು, ಒಂದು ವೇಳೆ ಈ ಬಗ್ಗೆ ದೂರುಗಳು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿಯೊಡನೆ ಸಭೆ ನಡೆಸಿ ಕಡತಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು. ನಿಗದಿಪಡಿಸಿರುವ ಸಮಯಕ್ಕೆ ಎಲ್ಲಾ ಅರ್ಜಿಗಳು ವಿಲೇವಾರಿ ಮಾಡಬೇಕು ಹಾಗೂ ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಾಗಬೇಕು’ ಎಂದು ತಾಕೀತು ಮಾಡಿದರು.
ಆರ್.ಟಿ.ಸಿ ವಿತರಣಾ ಕೇಂದ್ರ ಸೇರಿದಂತೆ ಸರ್ವೇ ಶಾಖೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ನಿಯಮಿತ ಕಾಲಾವಧಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಜನನ– ಮರಣ ಶಾಖೆಯಲ್ಲಿ ನಿಯಮಿತ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಗ್ರೇಡ್– 2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಸೂಚಿಸಿದ ಅವರು, ದಾಖಲೆ ಕೊಠಡಿಯಲ್ಲಿ ತುರ್ತಾಗಿ ನಕಲು ಒದಗಿಸಲು ಸೂಚಿಸಿದರು. ಇತ್ತೀಚೆಗೆ ನಡೆದ ತಾಲೂಕು ಕಚೇರಿ ಕಟ್ಟಡದ ದುರಸ್ತಿ ಕೆಲಸದ ಬಗ್ಗೆ ಪರಿಶೀಲನೆಯನ್ನೂ ನಡೆಸಿದರು.
ಗ್ರೇಡ್ 2 ತಹಶೀಲ್ದಾರ್ ಸೋಮಶೇಖರಯ್ಯ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.