ಕೆ.ಆರ್.ಪೇಟೆ: ನಾಯಕ ಸಮಾಜಕ್ಕೆ ನೀಡಬೇಕಾದ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರ್ಕಾರವು ಶೀಘ್ರವೇ ಮಂಜೂರು ಮಾಡಬೇಕು ಎಂದು ರಾಜನಹಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಯಶಸ್ವಿನಿ ಸಮುದಾಯ ಭನವದಲ್ಲಿ ನಡೆದ ಮಂಡ್ಯ ಜಿಲ್ಲಾ ನಾಯಕ ಜನಾಂಗದ ಸಮಾವೇಶದಲ್ಲಿ ಅವರು ಮಾತನಾಡಿದರು.
ಮುಂದಿನ ಫೆ.8 ಮತ್ತು 9ರಂದು ರಾಜನಹಳ್ಳಿ ಮಠದ ಆವರ ಣದಲ್ಲಿ 3ನೇ ವರ್ಷದ ಜಾತ್ರಾ ಮಹೋ ತ್ಸವ ನಡೆಯಲಿದೆ. ಅದರಲ್ಲಿ ಸಮಾಜದ ಸಂಘಟನಾ ಶಕ್ತಿ ಅನಾವರಣ ಗೊಳಿ ಸುವಂತೆ ಅವರು ಮನವಿ ಮಾಡಿದರು.
ನಾಯಕ ಸಮಾಜವು ದೇಶಪ್ರೇಮಕ್ಕೆ, ಸ್ವಾಮಿನಿಷ್ಠೆಗೆ ತನ್ನದೇ ಆದ ಹಿರಿಮೆ ಗಳಿಸಿದೆ. ಇಂಥ ಜನಾಂಗದ ಬೇಡಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಯಾವುದೇ ಸರ್ಕಾರಕ್ಕೂ ಶೋಭೆಯಲ್ಲ. ಆದ್ದರಿಂದ ನ್ಯಾ.ಮೂ. ನಾಗಮೋಹನ್ ದಾಸ್ ಅವರು ನೀಡಿರುವ ವರದಿಯನ್ನು ರಾಜ್ಯ ಸರ್ಕಾರವು ಯಥಾವತ್ತಾಗಿ ಜಾರಿಗೊಳಿಸಲು ಕ್ರಮ ವಹಿಸಬೇಕು. ಇಲ್ಲದೆ ಇದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿರೇವಣ್ಣ, ಮಾಜಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ, ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುಂಡ, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಆರ್.ಜಗದೀಶ್, ಅಂಗಡಿ ರಾಮಣ್ಣ, ಶ್ರೀನಿವಾಸ್, ಮುಖಂಡರು ಇದ್ದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ಸೇವೆ ಶ್ಲಾಘನೀಯ: ತಾಲ್ಲೂಕಿನ ಹೇಮಗಿರಿಯ ತಪ್ಪಲಿನಲ್ಲಿರುವ ಬಿಜಿಎಸ್ ಪಬ್ಲಿಕ್ ಸ್ಕೂಲ್ಗೆ ಸ್ವಾಮೀಜಿ ಭೇಟಿ ನೀಡಿದರು. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕಾರ್ಯ ಕ್ರಮ ರೂಪಿಸುವಂತೆ ಸಲಹೆ ನೀಡಿದರು.
ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಕ್ಷೇತ್ರದ, ಸಂಸ್ಥೆಯ ಚಟುವಟಿಕೆಗಳ ಮಾಹಿತಿ ನೀಡಿದರು. ಬಿಜಿಎಸ್ ಪಬ್ಲಿಕ್ ಸ್ಕೂಲ್ನ ಮುಖ್ಯ ಶಿಕ್ಷಕಿ ಪವಿತ್ರ ಮತ್ತು ಶಿಕ್ಷಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.