ಶ್ರೀರಂಗಪಟ್ಟಣ: ತಾಲ್ಲೂಕಿನ ಬೀಚನಕುಪ್ಪೆ ವ್ಯಾಪ್ತಿಯ ಸ.ನಂ. 76ರಲ್ಲಿ 60 ಎಕರೆ ಸರ್ಕಾರಿ ಗೋಮಾಳದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪಹಣಿ ವಿತರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಳಗೊಳ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ. ಸುರೇಶ್ ಹಾಗೂ ಕೆಆರ್ಎಸ್ ಪಂಚಾಯಿತಿ ಸದಸ್ಯ ವಸಂತಕುಮಾರ್ ಆಗ್ರಹಿಸಿದರು.
ಪಟ್ಟಣದಲ್ಲಿ ಶನಿವಾರ ದಾಖಲೆ ಪ್ರದರ್ಶಿಸಿದ ಅವರು, ಸ.ನಂ. 76ರಲ್ಲಿ 1940ರಿಂದ 1960ರ ವರೆಗೆ 48 ಎಕರೆ ಜಮೀನಿಗೆ ಮಾತ್ರ ಅಧಿಕೃತವಾಗಿ ಸಾಗುವವಳಿ ಪತ್ರ ನೀಡಲಾಗಿದೆ. ಉಳಿದ 60 ಎಕರೆ ಭೂಮಿಗೆ ಸಾಗುವಳಿ ಚೀಟಿ, ಸರ್ವೆ ಸ್ಕೆಚ್ ಇಲ್ಲದೆ ಪಹಣಿ (ಆರ್ಟಿಸಿ) ಸೃಷ್ಟಿಸಿ, ಜಮೀನನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಉಪ ನೋಂದಣಿ ಕಚೇರಿಯಲ್ಲಿ ಒಪ್ಪಂದಪತ್ರ ನೋಂದಾಯಿಸಲಾಗಿದೆ ಎಂದು ಅವರು ದೂರಿದರು.
ಸ.ನಂ. 76ರ ಸರ್ಕಾರಿ ಹಾಗೂ ಹಿಡುವಳಿ ಜಮೀನನ್ನು ಟೌನ್ಶಿಪ್ ಹೆರಿನಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲು ಕೆಎಐಡಿಬಿ ಸಜ್ಜಾಗಿದೆ. ಈ ಭಾಗದಲ್ಲಿ ಪ್ರತಿ ಎಕರೆಗೆ ₹2 ಕೋಟಿ ಮಾರುಕಟ್ಟೆ ದರ ಇದೆ. ಆದರೆ ಕೆಐಎಡಿಬಿ ಅಂದಾಜು ₹ 25 ಲಕ್ಷ ದರ ನಿಗದಿ ಮಾಡಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಖಾಸಗಿ ಕಂಪೆನಿಯ ಪರ ಕೆಲಸ ಮಾಡುತ್ತಿದ್ದು ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಜಿಲ್ಲಾಡಳಿತ, ಸಚಿವರು ಹಾಗೂ ಶಾಸಕರು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ವಸಂತಕುಮಾರ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.