
ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಬಳಿ ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದ ಕೆಆರ್ಎಸ್ ಬಲದಂಡೆ (ಆರ್ಬಿಎಲ್ಎಲ್) ನಾಲೆಯ ಲಕ್ಷ್ಮಿಪುರ ಒಂದನೇ ವಿತರಣಾ ನಾಲೆಯನ್ನು ರೈತರು ಮೂರು ದಿನಗಳ ಕಾಲ ಶ್ರಮದಾನ ಮಾಡಿ ಸ್ವಚ್ಛಗೊಳಿಸಿದರು.
ನಾಲೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿ, ಗಿಡ ಗಂಟೆಗಳು ಬೆಳೆದಿದ್ದವು. ಇದರಿಂದ ಸರಾಗವಾಗಿ ನೀರು ಹರಿಯದೆ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತಿತ್ತು. ಬೆಳೆ ಕಳೆದುಕೊಳ್ಳುವ ಆತಂಕ ಎದುರಾದ ಕಾರಣ 1.5 ಕಿ.ಮೀ. ಉದ್ದದ ನಾಲೆಯನ್ನು ಪಾಲಹಳ್ಳಿ ಗ್ರಾಮದ 20ಕ್ಕೂ ಹೆಚ್ಚು ರೈತರು ಒಗ್ಗೂಡಿ ಸ್ವಚ್ಛಗೊಳಿಸಿದರು. ಮೂರು ದಿನಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ಕೆ ಜೆಸಿಬಿ ಯಂತ್ರವನ್ನೂ ಬಳಸಿದರು. ಕೆಲವೆಡೆ ಗುದ್ದಲಿ, ಪಿಕಾಸಿ, ಕುಡುಗೋಲು ಹಿಡಿದು ರೈತರೇ ಹೂಳು ಮತ್ತು ಕಳೆ ಗಿಡಗಳನ್ನು ತೆಗೆದರು.
‘ಆರ್ಬಿಎಲ್ಎಲ್ ನಾಲೆಯ ವಿತರಣಾ ನಾಲೆಯಲ್ಲಿ ಅಪಾರ ಪ್ರಮಾಣದ ಹೂಳು ಮತ್ತು ಕಳೆ ಗಿಡಗಳು ತುಂಬಿ ಜಮೀನಿಗೆ ನೀರು ಬರುತ್ತಿರಲಿಲ್ಲ. ಜೆಸಿಬಿ ಯಂತ್ರದ ಬಾಡಿಗೆ ಸೇರಿ ಒಟ್ಟು ₹30 ಸಾವಿರ ಖರ್ಚು ಮಾಡಿ ನಾಲೆಯನ್ನು ಸ್ವಚ್ಛಗೊಳಿಸಿದ್ದೇವೆ’ ಎಂದು ರೈತ ಚಂದ್ರಣ್ಣ ಹೇಳಿದರು.
‘ವರ್ಷಕ್ಕೆ ಒಮ್ಮೆಯೂ ವಿತರಣಾ ನಾಲೆಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ರೈತರ ಬವಣೆಪಡುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಸನ್ನಕುಮಾರ್ ದೂರಿದರು.
‘ಆರ್ಬಿಎಲ್ಎಲ್ ನಾಲೆಯ ವಿತರಣಾ ನಾಲೆಯನ್ನು ಸ್ವಚ್ಛಗೊಳಿಸಲು ನೀರು ಬಳಕೆದಾರರ ಸಹಕಾರ ಸಂಘಕ್ಕೆ ತಿಳಿಸಲಾಗಿತ್ತು. ಕೆಲಸ ಮಾಡುವುದು ತಡವಾದ ಕಾರಣ ರೈತರೇ ಸ್ವಚ್ಛಗೊಳಿಸಿಕೊಂಡಿದ್ದಾರೆ. ಆರ್ಬಿಎಲ್ಎಲ್ ನಾಲೆಯಲ್ಲಿ ಒಟ್ಟು 12 ಶಾಖೆಗಳಿದ್ದು, ಅವುಗಳ ಜೀರ್ಣೋದ್ಧಾರಕ್ಕೆ ರೂ. 16 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಸುರೇಶಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.