
ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮದ ಹೊರವಲಯದ 10 ಮೈಲಿ ಕಲ್ಲಿನ ಬಳಿ ಪ್ರದೇಶದ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, 10 ಎಕರೆ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗ್ರಾಮದ ರೈತರಾದ ಕಾಳೇಗೌಡ, ಚಿಕ್ಕಲಿಂಗಯ್ಯ, ಜಯರಾಮು, ಕೆಂಪೇಗೌಡ, ಚೌಡಯ್ಯ, ಚಂದ್ರಮ್ಮ, ದೇವಿಪುರದ ಮಲ್ಲೇಶ್ ಹಾಗೂ ಮದ್ದೂರು ತಾಲ್ಲೂಕಿನ ಕರಡಕೆರೆ ಗ್ರಾಮಗಳ ರೈತರು ಸೇರಿದಂತೆ ಹಲವರ ಕಬ್ಬಿನ ಗದ್ದೆಗಳು ಸುಟ್ಟು ನಾಶವಾಗಿವೆ. ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು ಹತ್ತು ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ.
ಸ್ಥಳೀಯರು ಬೆಂಕಿ ಕಂಡು ನಂದಿಸುವ ಪ್ರಯತ್ನ ನಡೆಸಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಕಬ್ಬು ಸುಟ್ಟು ಕರಕಲಾಗಿದೆ.
‘ಭೀಕರ ಬರಗಾಲದ ನಡುವೆಯೂ ಕೂಳವೆಬಾವಿಯ ನೀರಿನಿಂದ ಕಬ್ಬು ಬೆಳೆದಿದ್ದೆವು. ಬೆಂಕಿ ಬಿದ್ದ ಪರಿಣಾಮ ₹6 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಹಾಗಾಗಿ ತಾಲ್ಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರಾದ ಕಾಳೇಗೌಡ, ಚಿಕ್ಕಲಿಂಗಯ್ಯ, ಜಯರಾಮು, ಕೆಂಪೇಗೌಡ, ಚೌಡಯ್ಯ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.