ನಾಗಮಂಗಲ: ತಾಲ್ಲೂಕಿನ ಎಚ್.ಎನ್.ಕಾವಲು ಪ್ರದೇಶದಲ್ಲಿ ಗಂಧದ ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಕಳ್ಳರ ಮೇಲೆ ಬುಧವಾರ ರಾತ್ರಿ ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬ ಗಾಯಗೊಂಡಿದ್ದು, ಮತ್ತಿಬ್ಬರು ಬಂಧನಕ್ಕೊಳಗಾಗಿದ್ದಾರೆ.
ಗುಂಡಿನ ದಾಳಿಯಿಂದ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಗೆಂಡಹಳ್ಳಿ ಗ್ರಾಮದ ಗೋವಿಂದಪ್ಪ ಗಾಯಗೊಂಡಿದ್ದು ಆತನ ಮಕ್ಕಳಾದ ಶಂಕರ, ಕುಮಾರ್ ಅವರನ್ನು ಬಂಧಿಸಲಾಗಿದೆ. ಎಚ್.ಎನ್.ಕಾವಲು ಪ್ರದೇಶ ಮೀಸಲು ಅರಣ್ಯವಾಗಿದ್ದು ಗಂಧದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮೂವರು ಆರೋಪಿಗಳು ಗಂಧದ ಮರ ಕಡಿಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು.
ಶರಣಾಗುವಂತೆ ಅಧಿಕಾರಿಗಳು ಮೊದಲು ಆರೋಪಿಗಳಿಗೆ ಸೂಚಿಸಿದರು. ಆದರೆ ಆರೋಪಿಗಳು ಅಧಿಕಾರಿಗಳ ಮೇಲೆ ಮಚ್ಚು ಬೀಸಿ ಪರಾರಿಯಾಗಲು ಯತ್ನಿಸಿದ್ಧಾರೆ. ಈ ಸಂದರ್ಭದಲ್ಲಿ ಡಿಆರ್ಎಫ್ಒ ಮಂಜು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡು ಗೋವಿಂದಪ್ಪನಿಗೆ ತಾಗಿದ್ದು ಆತ ಗಾಯಗೊಂಡಿದ್ದಾನೆ.
ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಶಂಕರ ಹಾಗೂ ಕುಮಾರ್ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.